ಕ್ವಾಲಾಲಂಪುರ: ಮಿಲಿಟರಿ ದಂಗೆಯ ನಡುವೆಯೂ ತನ್ನ ದೇಶದಲ್ಲಿರುವ 1200 ಮ್ಯಾನ್ಮಾರ್ ವಲಸಿಗರನ್ನು ಅವರ ತಾಯ್ನಾಡಿಗೆ ವಾಪಸ್ ಕಳುಹಿಸುತ್ತಿರುವ ಮಲೇಷ್ಯಾ ಸರ್ಕಾರ, ಇವರನ್ನು ಅಲ್ಪಸಂಖ್ಯಾತ ಮುಸ್ಲಿಂ ರೋಹಿಂಗ್ಯಾವಲಸಿಗರು ಅಥವಾ ವಿಶ್ವಸಂಸ್ಥೆಯ ವಲಸೆ ಸಂಸ್ಥೆಯಲ್ಲಿ ನೋಂದಣಿಯಾಗಿರುವ ವಲಸಿಗರೊಂದಿಗೆ ಸೇರಿಸುವುದಿಲ್ಲ ಎಂದು ಭರವಸೆ ನೀಡಿದೆ.
ಮಲೇಷ್ಯಾದ ವಲಸೆ ಮುಖ್ಯಸ್ಥ ಖೈರುಲ್ ಝೈಮೀ ದೌಡ್ ಅವರು ಸೋಮವಾರ ರಾತ್ರಿ ಈ ಹೇಳಿಕೆ ನೀಡಿದ್ದು, ‘ಬಂಧಿತ ವಲಸಿಗರನ್ನು ಇದೇ 23 ರಂದು ಮ್ಯಾನ್ಮಾರ್ ನೌಕಾಪಡೆಯ ಹಡಗುಗಳಲ್ಲಿ ಗಡೀಪಾರು ಮಾಡಲಾಗುವುದು‘ ಎಂದು ಹೇಳಿದ್ದಾರೆ.
ಇದೇ ವೇಳೆ, ಈ ವಲಸಿಗರಲ್ಲಿರುವ ದುರ್ಬಲ ವರ್ಗದ ಮಹಿಳೆಯರು ಮತ್ತು ಮಕ್ಕಳು ಬಗ್ಗೆ ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಹೈಕಮಿಷನರ್ ಕಳವಳ ವ್ಯಕ್ತಪಡಿಸಿದ್ದಾರೆ. ಸೂಕ್ತ ಪ್ರಯಾಣದ ದಾಖಲಾತಿಗಳ ಕೊರತೆ, ಸಾಮಾಜಿಕ ಭೇಟಿಗಾಗಿ ನೀಡಿದ್ದ ಅನುಮತಿಯನ್ನು ಉಲ್ಲಂಘಿಸಿ, ದೀರ್ಘಕಾಲ ದೇಶದಲ್ಲಿ ಉಳಿದುಕೊಳ್ಳುವುದು ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಮ್ಯಾನ್ಮಾರ್ನ 1,200 ಜನರನ್ನು ಬಂಧಿಸಲಾಗಿದೆ ಎಂದು ಝೈಮಿ ಹೇಳಿದರು.
ಪ್ರತಿ ವರ್ಷ ನಮ್ಮ ದೇಶದಿಂದ ಬಂಧಿತ ವಲಸಿಗರನ್ನು ಹೀಗೆ ಗಡೀಪಾರು ಮಾಡಲಾಗುತ್ತದೆ. ಮ್ಯಾನ್ಮಾರ್ ವಲಸಿಗರನ್ನು ಕಳುಹಿಸುತ್ತಿರುವುದು ವಲಸಿಗರ ಗಡೀಪಾರು ಪ್ರಕ್ರಿಯೆಯ ಒಂದು ಭಾಗ ಎಂದು ಝೈಮಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.