ಇಸ್ಲಾಮಬಾದ್, ನವದೆಹಲಿ:ಪಾಕಿಸ್ತಾನದ ಬಾಲ್ಕೋಟ್ನಲ್ಲಿನ ಉಗ್ರರ ಶಿಬಿರದ ಮೇಲೆ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯ ವೇಳೆ ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ ಹತ್ಯೆಯಾಗಿದ್ದಾನೆ ಎಂಬ ಸುದ್ದಿಯೊಂದು ಭಾನುವಾರ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ಇದನ್ನು ಯಾವುದೇ ಅಧಿಕೃತ ಮೂಲಗಳು ದೃಢಪಡಿಸಿಲ್ಲ.
ಜೈಷ್ ತರಬೇತಿ ಶಿಬಿರದ ಮೇಲೆ ನಡೆದ ದಾಳಿಯಿಂದ ಉಂಟಾದ ಹಾನಿಯ ಬಗ್ಗೆ ನಿಖರವಾದ ಮಾಹಿತಿ ಬಹಿರಂಗಗೊಳಿಸುವಂತೆ ಹೆಚ್ಚುತ್ತಿರುವ ಒತ್ತಡಗಳ ಮಧ್ಯೆಯೇ ಮಸೂದ್ ಅಜರ್ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.
ಜೈಷ್- ಎ- ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್ ನಮ್ಮ ಬಳಿ ಇದ್ದಾನೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಹೇಳಿದ್ದರು. ಆದರೆ ಮಸೂದ್ ಅಜರ್ ಆರೋಗ್ಯ ಸರಿ ಇಲ್ಲ, ಆತ ಮನೆಯಿಂದ ಹೊರಗೆ ಹೋಗುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ ಸಚಿವರು ತಿಳಿಸಿದ್ದರು.
ಇಸ್ಲಾಮಾಬಾದ್ನಲ್ಲಿ ವರದಿಯೊಂದರ ಪ್ರಕಾರ, ದಾಳಿಯ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಸೂದ್ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ತೀವ್ರ ಗಾಯಗೊಂಡಿದ್ದ ಆತ, ಮೃತಪಟ್ಟಿದ್ದಾನೆ ಎಂದು ಉಲ್ಲೇಖಿಸಿತ್ತು.
ಮಸೂದ್ ಅಜರ್ನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖುರೇಷಿ, ಭಾರತ ಆತನ ಬಗ್ಗೆ ಸಾಕ್ಷ್ಯಗಳನ್ನು ನೀಡಬೇಕು. ಆತನ ಮೇಲಿರುವ ಆರೋಪ ಪಾಕಿಸ್ತಾನದ ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ ಎಂದು ಹೇಳಿದ್ದರು.
ಪುಲ್ವಾಮ ಆತ್ಮಾಹುತಿ ದಾಳಿಯಲ್ಲಿ ಪಾಕಿಸ್ತಾದ ಜೈಷ್-ಎ- ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇದೆ ಎಂದು ಆರೋಪಿಸಿದ್ದ ಭಾರತ, ಈ ಬಗ್ಗೆ ದಾಖಲೆಗಳನ್ನು ಪಾಕಿಸ್ತಾನಕ್ಕೆ ಬುಧವಾರ ಹಸ್ತಾಂತರಿಸಿತ್ತು. ಅಜರ್ನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂದು ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳು ವಿಶ್ವಸಂಸ್ಥೆಗೆ ಒತ್ತಾಯಿಸಿವೆ.
ನಿಮ್ಮ ಬಳಿ ಸಾಕ್ಷ್ಯಗಳಿದ್ದರೆ ಬಂದು ಮಾತನಾಡೋಣ, ಈ ವಿಷಯದ ಬಗ್ಗೆ ರಾಜತಾಂತ್ರಿಕ ಮಾತುಕತೆ ನಡೆಸೋಣ ಎಂದು ಖುರೇಷಿ ಹೇಳಿದ್ದರು.
* ಇದವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.