ಮೆಹುಲ್ ಚೋಕ್ಸಿ ಅಂದು – ಇಂದು
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ₹13,000 ಕೋಟಿ ಬಾಕಿ ಇರಿಸಿ ಪರಾರಿಯಾಗಿದ್ದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತದ ತನಿಖಾ ಸಂಸ್ಥೆಯು ಬೆಲ್ಜಿಯಂನಲ್ಲಿ ಸೋಮವಾರ ಬಂಧಿಸಿದೆ.
ಚೋಕ್ಸಿಯನ್ನು ಗಡೀಪಾರು ಮಾಡುವಂತೆ ಸಂಸ್ಥೆ ಕೋರಿತ್ತು. ಇದೇ ಪ್ರಕರಣದಲ್ಲಿ ಈವರೆಗೂ ಕ್ರಮ ಎದುರಿಸುತ್ತಿರುವ ಎರಡನೇ ವ್ಯಕ್ತಿ ಚೋಕ್ಸಿಯಾಗಿದ್ದಾರೆ. ಇದೇ ಪ್ರಕರಣದಲ್ಲಿ ಚೋಕ್ಸಿ ಅಳಿಯ ನೀರವ್ ಮೋದಿ ವಿರುದ್ಧವೂ ತನಿಖಾ ಸಂಸ್ಥೆ ಕ್ರಮ ಕೈಗೊಂಡಿತ್ತು.
2025ರ ಏ. 14: ಗಡೀಪಾರು ಮಾಡುವಂತೆ ಭಾರತದ ಕೋರಿಕೆಯಂತೆ ಮೆಹುಲ್ ಜೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧನ
ತಲೆಮರೆಸಿಕೊಂಡಿದ್ದ ವಜ್ರವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತದ ತನಿಖಾ ಸಂಸ್ಥೆಯ ಅಧಿಕಾರಿಗಳು ಬೆಲ್ಜಿಯಂನಲ್ಲಿ ಬಂಧಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ₹13,000 ಕೋಟಿ ಬಾಕಿ ಇರಿಸಿ ಪರಾರಿಯಾದ ಪ್ರಕರಣ ಇವರ ಮೇಲಿದೆ.
ಇದೇ ಪ್ರಕರಣದಲ್ಲಿ ಪ್ರಮುಖ ಶಂಕಿತ ಚೋಕ್ಸಿ ಸೋದರಳಿಯ ನೀರವ್ ಮೋದಿಯನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಕೋರಿಕೆ ಮೇರೆಗೆ ಶನಿವಾರ ವಶಕ್ಕೆ ಪಡೆಯಲಾಗಿತ್ತು.
2025ರ ಮಾರ್ಚ್ 22: ಭಾರತದಿಂದ ಪರಾರಿಯಾದ ಉದ್ಯಮಿ ಚೋಕ್ಸಿ ಇರುತ್ತಿದ್ದುದು ಬೆಲ್ಜಿಯಂನ ಆಂತ್ವೆಪ್ನಲ್ಲಿ
ವಂಚನೆ ಪ್ರಕರಣದ ನಂತರ ಭಾರತದಿಂದ ಪರಾರಿಯಾದ ಮೆಹುಲ್ ಚೋಕ್ಸಿ ತನ್ನ ಪತ್ನಿ ಪ್ರೀತಿ ಚೋಕ್ಸಿಯೊಂದಿಗೆ ಬೆಲ್ಜಿಯಂನ ಆಂತ್ವೆಪ್ನಲ್ಲಿ ಜೀವನ ನಡೆಸುತ್ತಿದ್ದರು. ಖಾಯಂ ನಿವಾಸಿಯ ಸೌಲಭ್ಯವನ್ನೂ ಬೆಲ್ಜಿಯಂ ಸರ್ಕಾರದಿಂದ ಪಡೆದುಕೊಂಡಿದ್ದರು. ನಂತರದಲ್ಲಿ ಭಾರತ ಸರ್ಕಾರವು ಚೋಕ್ಸಿಯನ್ನು ಗಡೀಪಾರು ಮಾಡುವಂತೆ ಅಲ್ಲಿನ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿತ್ತು. ತಾನು ಭಾರತದ ನಿವಾಸಿ ಎಂದು ಮರೆಮಾಚಿ ಆಂಟಿಗ್ವಾದ ಪ್ರಜೆ ಎಂದು ಸುಳ್ಳು ದಾಖಲೆ ಮತ್ತು ನಕಲಿ ಸಹಿ ಮಾಡಿದ ಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಬೆಲ್ಜಿಯಂಗೆ ಭಾರತ ಸರ್ಕಾರ ಹೇಳಿತ್ತು.
2025ರ ಫೆ. 13: ಮೆಹುಲ್ ಚೋಕ್ಸಿಯ ಕಂಪನಿಗೆ ಸೇರಿದ ಆಸ್ತಿಗಳ ಹರಾಜಿಗೆ ಇತ್ತೀಚೆಗೆ ನ್ಯಾಯಾಲಯ ಆದೇಶಿಸಿತ್ತು
ವಂಚನೆ ಪ್ರಕರಣದಲ್ಲಿ ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯ ಗೀತಾಂಜಲಿ ಜೆಮ್ಸ್ ಕಂಪನಿಗೆ ಸೇರಿದ 13 ಆಸ್ತಿಗಳನ್ನು ಹರಾಜು ಹಾಕುವಂತೆ ಮುಂಬೈನ ವಿಶೇಷ ನ್ಯಾಯಲಯ ಆದೇಶಿಸಿತ್ತು. ನಿರ್ವಹಣೆ ಇಲ್ಲದ ಆಸ್ತಿಯನ್ನು ಹೆಚ್ಚು ದಿನ ಇಟ್ಟರೆ ಅದರ ಮೌಲ್ಯ ಕುಸಿಯಲಿದೆ ಎಂಬ ಸಾಲ ನೀಡಿದ ಬ್ಯಾಂಕ್ನ ಅರ್ಜಿಯನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಎಂ. ಮೆಂಜಾಗೆ ಅವರು ಪುರಸ್ಕರಿಸಿದರು.
ಹೀಗೆ ಹರಾಜಿಗೆ ಆದೇಶವಾದ ಆಸ್ತಿಗಳಲ್ಲಿ ಮುಂಬೈನ ಸಾಂತಾಕ್ರೂಜ್ನಲ್ಲಿರುವ ಖೇಣಿ ಟವರ್ನಲ್ಲಿನ ಏಳು ಫ್ಲಾಟ್ಗಳು, ಭಾರತ್ ಡೈಮಂಡ್ ಬೋರ್ಸ್ನ ವಾಣಿಜ್ಯ ಘಟಕ, ಗುಜರಾತ್ನ ಸೂರತ್ನಲ್ಲಿರುವ ಡೈಮಂಡ್ ಪಾರ್ಕ್ನಲ್ಲಿರುವ ನಾಲ್ಕು ಕಚೇರಿಗಳು ಮತ್ತು ಒಂದು ಅಂಗಡಿ ಸೇರಿದೆ.
2025ರ ಫೆ. 11: ಮೆಹುಲ್ ಚೋಕ್ಸಿ ಬೆಲ್ಜಿಯಂಗೆ ಹೋಗಿದ್ದು ಶಂಕಿತ ಕ್ಯಾನ್ಸರ್ ಚಿಕಿತ್ಸೆಗಾಗಿ ಎಂದು ಅವರ ಪರ ವಕೀಲರಿಂದ ನ್ಯಾಯಾಲಯಕ್ಕೆ ಮಾಹಿತಿ
ಮೆಹುಲ್ ಚೋಕ್ಸಿ ಬೆಲ್ಜಿಯಂಗೆ ತೆರಳಿದ್ದು ಗಂಭೀರ ಸ್ವರೂಪದ ಕ್ಯಾನ್ಸರ್ಗೆ ವೈದ್ಯಕೀಯ ಚಿಕಿತ್ಸೆ ಪಡೆಯುವ ಸಲುವಾಗಿ. ಈ ಕುರಿತು ಅರ್ಜಿ ಸಲ್ಲಿಸಬಯಸುತ್ತೇನೆ ಎಂದು ಚೋಕ್ಸಿ ಪರವಾಗಿ ವಾದ ಮಂಡಿಸಿದ ವಕೀಲ ವಿಜಯ ಅಗರವಾಲ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
2024ರ ಡಿ. 13: ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸದಂತೆ ಕೋರಿ ಚೋಕ್ಸಿ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ
ಪಿಎನ್ಬಿ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿರುವ ಮೆಹುಲ್ ಚೋಕ್ಸಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯದ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿದ್ದ ಚೋಕ್ಸಿ ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.
2024ರ ಡಿ. 10: ಮೆಹುಲ್ ಚೋಕ್ಸಿಗೆ ಸೇರಿದ ₹2,500 ಕೋಟಿ ಆಸ್ತಿ ಸ್ವಾಧೀನ ಪ್ರಕ್ರಿಯೆ ಆರಂಭಿಸಿದ ED
₹2,500 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿತು. ಅದರಂತೆಯೇ ಗೀತಾಂಜಲಿ ಜೆಮ್ಸ್ ಕಂಪನಿಯ ಸಾಲಗಾರರಿಗೆ ₹125 ಕೋಟಿ ಆಸ್ತಿಯ ಸ್ವಾಧೀನಕ್ಕೆ ಇಡಿ ಮುಂದಾಯಿತು.
2024ರ ಆ. 14: ಪಾಸ್ಪೋರ್ಟ್ ಅಮಾನತಿಗೆ ಸಂಬಂಧಿಸಿದಂತೆ ದಾಖಲೆ ಮರಳಿಸುವಂತೆ ಚೋಕ್ಸಿ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ
ಪಾಸ್ಪೋರ್ಟ್ ಅಮಾನತಾಗಿರುವ ಸಂಬಂಧ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗೆ ದಾಖಲೆ ಸಲ್ಲಿಸಲು ನ್ಯಾಯಾಲಯದಲ್ಲಿರುವ ದಾಖಲೆಗಳನ್ನು ನೀಡುವಂತೆ ಕೋರಿದ್ದ ಚೋಕ್ಸಿ ಅರ್ಜಿಯನ್ನು ನ್ಯಾಯಾಲಯದ ತಿರಸ್ಕರಿಸಿತು. ಭಾರತಕ್ಕೆ ಭದ್ರತಾ ಅಪಾಯವಿದೆ ಎಂಬ ಕಾರಣದಿಂದ ಪಾಸ್ಪೋರ್ಟ್ ಅನ್ನು ಅಮಾನತು ಮಾಡಲಾಗಿದೆ. ಇದರಿಂದ ನಾನು ಭಾರತಕ್ಕೆ ಎಂದಿಗೂ ಬರಲು ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದರು.
2024ರ ಮೇ 23: ಭಾರತಕ್ಕೆ ಮರಳುವುದು ತನ್ನ ನಿಯಂತ್ರಣ ಮೀರಿದೆ ಎಂದಿದ್ದ ಚೋಕ್ಸಿ
ವಂಚನೆ ಪ್ರಕರಣದಲ್ಲಿ ದೇಶದಿಂದ ಪಲಾಯನಗೈದಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ, ತನ್ನನ್ನು ‘ಪರಾರಿಯಾದ ಆರ್ಥಿಕ ಅಪರಾಧಿ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕೆಂದೇನೂ ದೇಶ ತೊರೆದಿಲ್ಲ ಅಥವಾ ಭಾರತಕ್ಕೆ ಬರಬೇಕೆಂದು ನಿರಾಕರಿಸುತ್ತಿಲ್ಲ. ಭಾರತದ ಅಧಿಕಾರಿಗಳು ತನ್ನ ಪಾಸ್ಪೋರ್ಟ್ ಅಮಾನತುಗೊಳಿಸಿದ್ದಾರೆ ಎಂದಿದ್ದರು.
2024ರ ಫೆ. 19: ಗೀತಾಂಜಲಿ ಜೆಮ್ಸ್ನ ಆಸ್ತಿ ಸ್ವಾಧೀನಕ್ಕೆ ಎನ್ಸಿಎಲ್ಟಿ ಆದೇಶ
ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಸೇರಿದ ಗೀತಾಂಜಲಿ ಜೆಮ್ಸ್ ಜ್ಯುಯಲರಿ ಆಸ್ತಿಯ ಸ್ವಾಧೀನಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಆದೇಶಿಸಿದೆ. ಇದಕ್ಕಾಗಿ ಶಾಂತನು ಟಿ. ರೇ ಅವರನ್ನು ಪೀಠವು ನೇಮಕ ಮಾಡಿತು.
2023ರ ಜುಲೈ 31: ನೆಟ್ಫ್ಲಿಕ್ಸ್ನ ‘ಬ್ಯಾಡ್ ಬಾಯ್ ಬಿಲೇನಿಯರ್ಸ್’ ಪ್ರಕರಣದಲ್ಲಿ ₹2ಲಕ್ಷ ಠೇವಣಿ ಇಡಲು ನಿರ್ದೇಶಿಸಿದ ಹೈಕೋರ್ಟ್
‘ಬ್ಯಾಡ್ ಬಾಯ್ ಬಿಲೇನಿಯರ್ಸ್‘ ಎಂಬ ಚಿತ್ರವನ್ನು ಪ್ರಸಾರ ಮಾಡದಂತೆ ನೆಟ್ಫ್ಲಿಕ್ಸ್ಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ಪುರಸ್ಕರಿಸಲು ₹2ಲಕ್ಷ ಠೇವಣಿ ಇಡಲು ಹೈಕೋರ್ಟ್ ಚೋಕ್ಸಿಗೆ ನಿರ್ದೇಶಿಸಿತ್ತು.
ಚೋಕ್ಸಿ ಭಾರತದ ನಿವಾಸಿಯೂ ಅಲ್ಲ, ನಾಗರಿಕನೂ ಅಲ್ಲ. ದೇಶದಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ತಮ್ಮ ಧಾವೆಯಲ್ಲಿ ಅವರ ಪರ ನ್ಯಾಯ ಬಾರದಿದ್ದಲ್ಲಿ, ಅವರ ಮೇಲೆ ಹೇರಲಾಗಿದ್ದ ಮೊತ್ತ ವಸೂಲು ಮಾಡುವುದು ಕಷ್ಟ. ಹೀಗಾಗಿ ಈಗಲೇ ಠೇವಣಿ ಇಡಬೇಕು ಎಂದು ನ್ಯಾಯಾಲಯ ಹೇಳಿತ್ತು.
2023ರ ಜೂನ್ 15: ಚೋಕ್ಸಿಗೆ ಸೇರಿದ್ದ ಬ್ಯಾಂಕ್, ಡಿಮ್ಯಾಟ್, ಮ್ಯೂಚುಯಲ್ ಫಂಡ್ ಖಾತೆಯನ್ನು ಜಪ್ತಿ ಮಾಡಿದ ಸೆಬಿ
₹5.35 ಕೋಟಿ ಮರುಪಾವತಿಗೆ ವಿಫಲರಾಗಿದ್ದ ಮೆಹುಲ್ ಚೋಕ್ಸಿಗೆ ಸೇರಿದ ಬ್ಯಾಂಕ್ ಖಾತೆಗಳು, ಷೇರುಗಳು ಮತ್ತು ಮ್ಯೂಚುಯಲ್ ಫಂಡ್ ಖಾತೆಯನ್ನು ಜಪ್ತಿ ಮಾಡುವಂತೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶಿಸಿತ್ತು.
2023ರ ಮಾರ್ಚ್ 21: ರೆಡ್ ನೋಟಿಸ್ ಪುನರ್ಸ್ಥಾಪನೆಗೆ ಇಂಟರ್ಪೋಲ್ ಕೋರಿದ ಸಿಬಿಐ
2022ರ ಜುಲೈ 14: ಕೆನರಾಬ್ಯಾಂಕ್ಗೆ ₹55.27 ಕೋಟಿ ವಂಚನೆ ಪ್ರಕರಣದಲ್ಲಿ ಹೊಸ ಎಫ್ಐಆರ್ ದಾಖಲಿಸಿದ ಸಿಬಿಐ
2022ರ ಜೂನ್ 6: ಮೆಹುಲ್ ಚೋಕ್ಸಿ ಪತ್ನಿ ಪ್ರೀತಿ ಪ್ರದ್ಯುತ್ಕುಮಾರ್ ಕೊಠಾರಿ ಹಾಗೂ ಇತರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಜಾರಿ ನಿರ್ದೇಶನಾಲಯ
2022ರ ಮೇ 2: ವಜ್ರ ಹಾಗೂ ಆಭರಣಗಳ ಮೌಲ್ಯ ಹೆಚ್ಚಿಸಿ ₹25 ಕೋಟಿ ಸಾಲ ಪಡೆಯಲಾಗಿದೆ ಎಂದು ಆರೋಪಿಸಿ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
2022ರ ಜ. 31: ಗೀತಾಂಜಲಿ ಜೆಮ್ಸ್ಗೆ ಸಂಬಂಧಿಸಿದಂತೆ ವ್ಯಾಪಾರ ಕಾನೂನು ಉಲ್ಲಂಘಿಸಿದ ಮೆಹುಲ್ ಚೋಕ್ಸಿ ಹಾಗೂ ರಾಕೇಶ್ ಗಿರಿಧರಲಾಲ್ ಗಜೇರಾ ವಿರುದ್ಧ ಸೆಬಿಯು ಒಂದು ವರ್ಷಗಳ ಕಾಲ ನಿಷೇಧ ಹೇರಿ, ₹2.5 ಕೋಟಿ ದಂಡ ಹೇರಿತು
2021ರ ಜುಲೈ 15: ಡೊಮಿನಿಕಾದಲ್ಲಿ ಜಾಮೀನು ಸಿಕ್ಕ ನಂತರ ಆಂಟಿಗ್ವಾ ಮತ್ತು ಬರ್ಬುಡಾಕ್ಕೆ ಬಂದು ನೆಲೆಸಿದರು. 2018ರಿಂದ ಇಲ್ಲಿಯೇ ಇದ್ದಾರೆ. ಡೊಮೆನಿಕಾಕ್ಕೆ ಅಕ್ರಮ ಪ್ರವೇಶ ಪಡೆದಿದಕ್ಕಾಗಿ 51 ದಿನಗಳ ಸೆರೆವಾಸವನ್ನೂ ಅವರು ಅನುಭವಿಸಿದರು. 62 ವರ್ಷದ ಚೋಕ್ಸಿ ಹೈಕೋರ್ಟ್ ಮೊರೆ ಹೋಗಿ ವೈದ್ಯಕೀಯ ನೆರವಿಗಾಗಿ ಆಂಟಿಗ್ವಾಕ್ಕೆ ತೆರಳಲು ಅನುಮತಿ ಕೋರಿದರು.
2021ರ ಜುಲೈ 2: ಚೋಕ್ಸಿ ಅಪಹರಣದಲ್ಲಿ ಸರ್ಕಾರದ ಪಾತ್ರವಿದೆ ಎಂಬುದನ್ನು ನಿರಾಕರಿಸಿದ ಡೊಮಿನಿಕಾ ಪ್ರಧಾನಿ, ಇದೊಂದು ಅಸಂಬದ್ಧ ಹೇಳಿಕೆ ಎಂದಿದ್ದರು.
2021ರ ಜೂನ್ 23: ಸಾಕ್ಷಿಗಳಿಲ್ಲ. ಆದರೂ ಚೋಕ್ಸಿ ಅಪಹರಣವಾಗಿತ್ತು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ ಎಂದು ಆಂಟಿಗ್ವಾ ಮತ್ತು ಬರ್ಬುಡಾ ಪ್ರಧಾನಿ ಹೇಳಿದ್ದರು.
2021ರ ಜೂನ್ 16: ಪಿಎನ್ಬಿಯಿಂದ ಪಡೆದ ₹6,344.96 ಕೋಟಿಯನ್ನು ಚೋಕ್ಸಿ ಕಂಪನಿ ಅಕ್ರಮವಾಗಿ ಸಾಗಿಸಿದೆ ಎಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತು.
2018ರ ಮೇ 16: ಮೆಹುಲ್ ಚೋಕ್ಸಿ ಮತ್ತು ಗೀತಾಂಜಲಿ ಸಮೂಹದ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಸಿಬಿಐ
2018ರ ಏ. 8: ವಜ್ರವ್ಯಾಪಾರಿ ನೀರವ್ ಮೋದಿ ಹಾಗೂ ಅವರ ಮಾವ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐನ ವಿಶೇಷ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತು
2018ರ ಮಾರ್ಚ್ 20: ಸಿಬಿಐ ತನಿಖೆಗೆ ಹಾಜರಾಗಲು ಮೆಹುಲ್ ಚೋಕ್ಸಿ ನಕಾರ
2018ರ ಮಾರ್ಚ್ 3: ನಿರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ ನ್ಯಾಯಾಲಯ
2018ರ ಫೆ. 20: ಗೀತಾಂಜಲಿ ಜೆಮ್ಸ್ನ ಮೆಹುಲ್ ಚೋಕ್ಸಿ ವಿರುದ್ಧ ಕೇಳಿಬಂದಿರುವ ವಂಚನೆ ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿತು
2018ರ ಫೆ. 17: ಮೆಹುಲ್ ಚೋಕ್ಸಿ ವಿರುದ್ಧ ಹೊಸ ಎಫ್ಐಆರ್ ದಾಖಲಿಸಿದ ಸಿಬಿಐ
2018ರ ಜ. 4: ಮೆಹುಲ್ ಚೋಕ್ಸಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂಬ ಸುದ್ದಿ ವರದಿಯಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.