ADVERTISEMENT

ಮುಂಬರುವ ಕೊರೊನಾ ವೈರಸ್ ರೂಪಾಂತರ ತಳಿಗಳು ಹೆಚ್ಚು ಮಾರಕ; ಭಾರತ ಮೂಲದ ವಿಜ್ಞಾನಿ

ರವೀಂದ್ರ ಗುಪ್ತ ಎಚ್ಚರಿಕೆ

ಪಿಟಿಐ
Published 7 ಜನವರಿ 2022, 12:27 IST
Last Updated 7 ಜನವರಿ 2022, 12:27 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಂಡನ್: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ನ ತೀವ್ರತೆ ಸದ್ಯ ಕಡಿಮೆ ಇದ್ದರೂ, ಬರುವ ದಿನಗಳಲ್ಲಿ ಕಾಣಿಸಿಕೊಳ್ಳುವ ರೂಪಾಂತರ ತಳಿಗಳು ಹೆಚ್ಚು ಮಾರಕವಾಗಿರುವ ಸಾಧ್ಯತೆಗಳು ಹೆಚ್ಚು ಎಂದು ಬ್ರಿಟನ್‌ನಲ್ಲಿರುವ ಭಾರತ ಮೂಲದ ವಿಜ್ಞಾನಿ ರವೀಂದ್ರ ಗುಪ್ತ ಎಚ್ಚರಿಸಿದ್ದಾರೆ.

ರವೀಂದ್ರ ಗುಪ್ತ ಅವರು ಕೇಂಬ್ರಿಜ್ ವಿಶ್ವವಿದ್ಯಾಲಯದ ಕೇಂಬ್ರಿಜ್ ಇನ್ಸ್‌ಟಿಟ್ಯೂಟ್ ಫಾರ್ ಥೆರಾಪೆಟಿಕ್ ಇಮ್ಯುನಾಲಜಿ ಆ್ಯಂಡ್ ಇನ್‌ಫೆಕ್ಷಿಯಸ್‌ ಡಿಸೀಜಸ್‌ (ಸಿಐಟಿಐಐಡಿ)ನಲ್ಲಿ ಕ್ಲಿನಿಕಲ್ ಮೈಕ್ರೊಬಯೋಲಾಜಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊರೊನಾ ವೈರಸ್‌ ರೂಪಾಂತರಗೊಳ್ಳುತ್ತಲೇ ಇರುತ್ತದೆ. ಅದರ ‘ವಿಕಾಸ ಪ್ರಕ್ರಿಯೆಯಲ್ಲಿನ ದೋಷ’ದಿಂದಾಗಿ ಓಮೈಕ್ರಾನ್‌ ತಳಿ ಕಡಿಮೆ ತೀವ್ರತೆಯನ್ನು ಹೊಂದಿದೆಯಷ್ಟೆ. ಆದರೆ, ಮುಂದಿನ ದಿನಗಳಲ್ಲಿ ಕಂಡುಬರುವ ವೈರಸ್‌ನ ತಳಿಗಳು ಹೆಚ್ಚು ಮಾರಕವಾಗಿರಲಿವೆ ಎಂಬುದನ್ನು ಈ ವಿದ್ಯಮಾನ ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಓಮೈಕ್ರಾನ್‌ ತಳಿಯು ಕಡಿಮೆ ತೀವ್ರತೆಯನ್ನು ಹೊಂದಿದ್ದರೂ, ವೇಗವಾಗಿ ಪ್ರಸರಣಗೊಳ್ಳುತ್ತಿದೆ. ಈ ವಿದ್ಯಮಾನವನ್ನು ವಿಶ್ಲೇಷಿಸಿದಾಗ ವೈರಸ್‌ನ ತೀವ್ರತೆ ತಗ್ಗಲು ಯಾವುದೇ ಕಾರಣಗಳು ಕಾಣುತ್ತಿಲ್ಲ’ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

‘ಸೋಂಕು ತಗುಲಿದ ನಂತರ ಚಿಕಿತ್ಸೆಗೆ ಮುಂದಾಗುವ ಬದಲು ಸೋಂಕಿಗೆ ಒಳಗಾಗದಂತೆ ತಡೆಯುವುದೇ ಮುಖ್ಯ. ಓಮೈಕ್ರಾನ್‌ ಕಡಿಮೆ ತೀವ್ರತೆಯನ್ನು ಹೊಂದಿದೆ. ಇದು, ಹೆಚ್ಚು ಜನರಿಗೆ ಲಸಿಕೆ ನೀಡಲು ಒದಗಿರುವ ಅವಕಾಶ ಎಂದು ಭಾವಿಸಿ, ಕಾರ್ಯಪ್ರವೃತ್ತರಾಗುವುದು ಅಗತ್ಯ’ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.