ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಮತ್ತು ಗಿಲ್ಗಿಟ್– ಬಾಲ್ಟಿಸ್ತಾನ ಪ್ರಾಂತ್ಯಗಳನ್ನು ಸಂಪರ್ಕಿಸುವ ರಸ್ತೆಯನ್ನು ತಡೆದ ಉಗ್ರರು ಸಚಿವರೊಬ್ಬರನ್ನು ಹಾಗೂ ಹಲವು ಮಂದಿ ಪ್ರವಾಸಿಗರನ್ನು ಅಪಹರಿಸಿದ್ದಾರೆ ಎಂದು ಶನಿವಾರ ಮಾಧ್ಯಮಗಳು ವರದಿ ಮಾಡಿವೆ.
ಸಂಧಾನ ಮಾತುಕತೆಯ ಬಳಿಕ ಭಯೋತ್ಪಾದಕರು, ಗಿಲ್ಗಿಟ್– ಬಾಲ್ಟಿಸ್ತಾನದ ಸಚಿವ ಅಬೈದುಲ್ಲಾ ಬೇಗ್ ಹಾಗೂ ಪ್ರವಾಸಿಗರನ್ನು ಬಿಡುಗಡೆ ಮಾಡಿದ್ದಾರೆ ಎಂದೂ ಹೇಳಿವೆ.
ನಂಗಾ ಪರ್ಬತ್ನಲ್ಲಿ ವಿದೇಶಿಯರನ್ನು ಹತ್ಯೆ ಮಾಡಿರುವ ಮತ್ತು ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವ ಉಗ್ರರನ್ನು ಬಿಡುಗಡೆ ಮಾಡಬೇಕೆಂದು ಅಪಹರಣಕಾರರು ಬೇಡಿಕೆ ಮುಂದಿಟ್ಟಿದ್ದರು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಉಗ್ರರ ಬೇಡಿಕೆಯನ್ನು ಈಡೇರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದೂ ಹೇಳಿವೆ.
ಇಸ್ಲಾಮಾಬಾದ್ನಿಂದ ಗಿಲ್ಗಿಟ್ಗೆ ತೆರಳುತ್ತಿದ್ದ ವೇಳೆ ಉಗ್ರರು ತಮ್ಮನ್ನು ಅಪಹರಿಸಿದ್ದಾರೆ ಎಂದು ಬಿಡುಗಡೆಯಾದ ಬಳಿಕ ಸಚಿವರು ತಿಳಿಸಿದ್ದಾರೆ.
ನಂಗಾ ಪರ್ಬತ್ನಲ್ಲಿ 10 ಮಂದಿ ವಿದೇಶಿಯರನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿರುವ ಉಗ್ರ ಹಬೀಬುರ್ ರೆಹಮಾನ್ ಮತ್ತು ಆತನ ಸಹಚರರು ಈ ಕೃತ್ಯ ನಡೆಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.