ADVERTISEMENT

ಮುಂಬೈ ದಾಳಿ ರೂವಾರಿ ಭಯೋತ್ಪಾದಕ ಲಖ್ವಿಗೆ 15 ವರ್ಷ ಜೈಲು

ಪಿಟಿಐ
Published 8 ಜನವರಿ 2021, 12:17 IST
Last Updated 8 ಜನವರಿ 2021, 12:17 IST
ಭಯೋತ್ಪಾದಕ ಝಾಕೀರ್–ಉರ್–ರೆಹಮಾನ್ ಲಖ್ವಿ: ಎಪಿ ಚಿತ್ರ
ಭಯೋತ್ಪಾದಕ ಝಾಕೀರ್–ಉರ್–ರೆಹಮಾನ್ ಲಖ್ವಿ: ಎಪಿ ಚಿತ್ರ   

ಲಾಹೋರ್: ಮುಂಬೈ ದಾಳಿಯ ರೂವಾರಿ, ಲಷ್ಕರ್–ಇ–ತಯ್ಯಿಬಾ ಕಮಾಂಡರ್, ಭಯೋತ್ಪಾದಕ ಝಾಕೀರ್–ಉರ್–ರೆಹಮಾನ್ ಲಖ್ವಿಗೆ ಪಾಕಿಸ್ತಾನ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸಿನ ನೆರವು ಒದಗಿಸಿದ ಆರೋಪದ ಮೇಲೆ ಶನಿವಾರ ಪಾಕಿಸ್ತಾನದ ಪೊಲೀಸರು ಬಂಧಿಸಿದ್ದರು. 166 ಜನರು ಮೃತಪಟ್ಟು, ಹಲವರು ಗಾಯಗೊಂಡ 2008ರ ನವೆಂಬರ್ ತಿಂಗಳ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಈತನ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಆರೋಪವಿದೆ.

“ಭಯೋತ್ಪಾದನೆ ನಿಗ್ರಹ 1997ರ ಕಾಯ್ದೆಯ ಹಲವು ವಿದಿಯಡಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಅಪರಾಧಕ್ಕೆ ಉಗ್ರ ಲಖ್ವಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ತೀರ್ಪಿತ್ತಿದೆ ,” ಎಂದು ನ್ಯಾಯಾಲಯದ ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಭಯೋತ್ಪಾದನೆ ಕೃತ್ಯಗಳಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಪಾಕಿಸ್ತಾವನ್ನು ‘ಬೂದು ಪಟ್ಟಿ (grey list)’ಗೆ ಸೇರ್ಪಡೆಮಾಡುವ ಬೆಳವಣಿಗೆ ಕುರಿತು ಚರ್ಚಿಸಲು ಫೆಬ್ರವರಿಯಲ್ಲಿ ನಿಗದಿ ಮಾಡಲಾಗಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)‌ನ ಪರಿಶೀಲನಾ ಸಭೆಯ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿತ್ತು.

ADVERTISEMENT

ಈ ಮಧ್ಯೆ, ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ಒದಗಿಸಿದ ಆರೋಪದಡಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಷ್–ಇ–ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಬಂಧನಕ್ಕೆ ಗುರುವಾರ ಪಾಕಿಸ್ತಾನ ಕೋರ್ಟ್ ಬಂಧನ ವಾರೆಂಟ್ ಜಾರಿ ಮಾಡಿದೆ.

ಪಾಕಿಸ್ತಾನವು ಪ್ರಸ್ತುತ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ನಿಂದ ಒತ್ತಡ ಎದುರಿಸುತ್ತಿರುವ ಕಾರಣ ಮಸೂದ್ ಅಜರ್‌ಗೆ ಬಂಧನ ವಾರಂಟ್ ಹೊರಡಿಸಿದೆ ಎಂದು ಪಾಕಿಸ್ತಾನದ ಬೆಳವಣಿಗೆಗಳ ಬಗ್ಗೆ ಗಮನಿಸುತ್ತಿರುವ ಭಾರತೀಯ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.