ಸಮರ್ಕಂಡ್: ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ವಾರ್ಷಿಕ ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ ನಡೆಸಿದರು.
ರಷ್ಯಾವು ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಂಡ ನಂತರ ಉಭಯ ನಾಯಕರ ನಡುವಿನ ಮೊದಲ ಸಭೆಯಲ್ಲಿ, ‘ಈಗ ಯುದ್ಧದ ಸಮಯವಲ್ಲ. ಸಂಘರ್ಷವನ್ನು ಕೊನೆಗೊಳಿಸಿ’ ಎಂದು ಮೋದಿ ಅವರು ಪುಟಿನ್ಗೆ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿ ಪುಟಿನ್, ‘ಉಕ್ರೇನ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮ್ಮ ನಿಲುವು ಮತ್ತು ಕಳವಳ ನನಗೆ ಅರ್ಥವಾಗುತ್ತದೆ. ಶೀಘ್ರ ಸಂಘರ್ಷ ಕೊನೆಗೊಳಿಸಲು ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದರು.
ಉಭಯ ನಾಯಕರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯ ಕುರಿತು ಚರ್ಚೆ ನಡೆಸಿದರು.
ಎಸ್ಸಿಒಅಧ್ಯಕ್ಷ ಸ್ಥಾನ ಭಾರತಕ್ಕೆ ಹಸ್ತಾಂತರ
ಸಮರ್ಕಂಡ್ನಲ್ಲಿ ಶುಕ್ರವಾರ ಉಜ್ಬೇಕಿಸ್ತಾನ ಎಸ್ಸಿಒ ಅಧ್ಯಕ್ಷ ಸ್ಥಾನವನ್ನು ಸರದಿ ಪ್ರಕಾರ ಭಾರತಕ್ಕೆ ಹಸ್ತಾಂತರಿಸಿದೆ.
ಉಜ್ಬೇಕಿಸ್ತಾನ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರು ಸಮರ್ಕಂಡ್ನಲ್ಲಿ 22 ನೇ ಎಸ್ಸಿಒ ಶೃಂಗಸಭೆ ಅಧ್ಯಕ್ಷತೆ ವಹಿಸಿದ್ದರು.
‘2023ರಲ್ಲಿ ಭಾರತ ಎಸ್ಸಿಒ ಶೃಂಗಸಭೆ ಆಯೋಜಿಸುತ್ತದೆ. ಈ ಜವಾಬ್ದಾರಿಯುತ ಕಾರ್ಯಕ್ರಮ ಅನುಷ್ಠಾನದಲ್ಲಿ ಭಾರತಕ್ಕೆ ಸಹಾಯ ಮಾಡಲು ಕೈಲಾದಷ್ಟು ಪ್ರಯತ್ನಿಸುತ್ತೇವೆ’ ಎಂದು ಉಜ್ಬೇಕಿಸ್ತಾನ ವಿದೇಶಾಂಗ ಸಚಿವ ವ್ಲಾಡಿಮಿರ್ ನೊರೊವ್ ಟ್ವೀಟ್ ಮಾಡಿದ್ದಾರೆ.
ಭಯೋತ್ಪಾದಕರ ಏಕ ಪಟ್ಟಿಗೆ ನಿರ್ಧಾರ
ಸಮರ್ಕಂಡ್ (ಪಿಟಿಐ):ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಸದಸ್ಯ ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು ಮತ್ತು ಉಗ್ರವಾದಿ ಗುಂಪುಗಳ ಏಕ ಪಟ್ಟಿಯನ್ನು ಸಿದ್ಧಪಡಿಸಲು ಶುಕ್ರವಾರ ನಡೆದ ಶೃಂಗಸಭೆಯಲ್ಲಿ ನಿರ್ಧರಿಸಲಾಗಿದೆ. ನಿಷೇಧಿತ ಸಂಘಟನೆಗಳಿಂದ ಬರುವ ಬೆದರಿಕೆಗಳಿಗೆ ತಿರುಗೇಟು ನೀಡುವ ಉದ್ದೇಶದಿಂದ ಈ ಪಟ್ಟಿ ಸಿದ್ಧಪಡಿಸಲು ಯೋಜಿಸಲಾಗಿದೆ.ಈ ಸಂಬಂಧ ಶೃಂಗಸಭೆಯ ಅಂತ್ಯದಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.