ಕಠ್ಮಂಡು: ಸಾಂವಿಧಾನಿಕ ನೀತಿ ನಿಬಂಧನೆಗಳ ಪ್ರಕಾರವೇ ಪ್ರಜಾ ಪ್ರತಿನಿಧಿ ಸಭೆಯನ್ನು ವಿಸರ್ಜಿಸಲಾಗಿದೆ ಎಂದು ಪ್ರತಿಪಾದಿಸಿದ ನೇಪಾಳದ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ, ಈ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ರದ್ದುಗೊಳಿಸಲು ಅಥವಾ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ಪ್ರಧಾನಿ ಕೆ. ಪಿ.ಶರ್ಮಾ ಒಲಿ ಅವರ ಶಿಫಾರಸು ಆಧರಿಸಿ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಮೇ 22 ರಂದು ಪ್ರಜಾಪ್ರತಿನಿಧಿ ಸಭೆಯನ್ನು ವಿಸರ್ಜಿಸಿ, ನವೆಂಬರ್ 12 ಮತ್ತು 19ರಂದು ಚುನಾವಣೆ ನಡೆಯುವುದಾಗಿ ಪ್ರಕಟಿಸಿದ್ದರು.
ವಿಸರ್ಜನೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ, ಲಿಖಿತವಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಜೂನ್ 9ರಂದು ಸುಪ್ರೀಂ ಕೋರ್ಟ್, ಅಧ್ಯಕ್ಷರು, ಪ್ರಧಾನ ಮಂತ್ರಿ ಮತ್ತು ಸ್ಪೀಕರ್ ಅವರಿಗೆ ನೋಟಿಸ್ ನೀಡಿತ್ತು. ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ, ಪ್ರಧಾನಿ ಒಲಿ ಮತ್ತು ಪ್ರಜಾಪ್ರತಿನಿಧಿ ಸಭೆಯ ಸ್ಪೀಕರ್ ಅಗ್ನಿ ಸಪ್ಕೊತಾ ಅವರು ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್ಗೆ ಪ್ರತಿಕ್ರಿಯೆ ಸಲ್ಲಿಸಿದ್ದರು.
ಪ್ರತಿಕ್ರಿಯೆಯಲ್ಲಿ ಅಧ್ಯಕ್ಷೆ ಮತ್ತು ಪ್ರಧಾನ ಮಂತ್ರಿ ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಂಡರೆ, ಸ್ಪೀಕರ್ ಸಪ್ಕೊತಾ ಅವರು ಪ್ರಜಾ ಪ್ರತಿನಿಧಿ ಸಭೆ ವಿಸರ್ಜನೆಯನ್ನು ಅಸಾಂವಿಧಾನಿಕ ನಡೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.