ಕಠ್ಮಂಡು: ಭಾರತದೊಂದಿಗಿನ ಗಡಿ ವಿವಾದದ ನಡುವೆಯ ನೇಪಾಳ, ಹೊಸ ಶಾಲಾ ಪಠ್ಯಕ್ರಮಗಳಲ್ಲಿ ಪರಿಚಯಿಸಿರುವ ಹೊಸ ಪಠ್ಯಪುಸ್ತಕಗಳಲ್ಲಿ, ಭಾರತದ ಮೂರು ಪ್ರಮುಖ ಆಯಕಟ್ಟಿನ ಪ್ರದೇಶಗಳನ್ನು ಗುರುತಿಸಿರುವ ಪರಿಷ್ಕೃತ ರಾಜಕೀಯ ನಕ್ಷೆಯನ್ನೂ ಸೇರಿಸಿದೆ.
ಶಿಕ್ಷಣ ಸಚಿವಾಲಯದ ಅಡಿಯಲ್ಲಿ ರೂಪುಗೊಂಡಿರುವಪಠ್ಯಕ್ರಮ ಅಭಿವೃದ್ಧಿ ಕೇಂದ್ರ ಇತ್ತೀಚೆಗೆ ಪರಿಷ್ಕೃತ ನಕ್ಷೆಯನ್ನೊಳಗೊಂಡ ನೂತನ ಪಠ್ಯ ಪುಸ್ತಕಗಳನ್ನು ಪ್ರಕಟಿಸಿದೆ ಎಂದು ಕೇಂದ್ರದ ಅಧಿಕಾರಿ ಗಣೇಶ್ ಭಟ್ಟಾರೈ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹೊಸ ಪುಸ್ತಕದ ಹೆಸರು ‘ನೇಪಾಳದ ಟೆರ್ರಿಟರಿ ಅಂಡ್ ರೀಡಿಂಗ್ ಮೆಟೀರಿಯಲ್ಸ್ ಫಾರ್ ಬಾರ್ಡರ್ ಇಶ್ಯೂಸ್‘. 9 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿರುವ ಈ ಪುಸ್ತಕಕ್ಕೆ ಶಿಕ್ಷಣ ಸಚಿವ ಗಿರಿರಾಜ್ ಮಣಿ ಪೊಖರಿಯಲ್ ಅವರು ಮುನ್ನುಡಿ ಬರೆದಿದ್ದಾರೆ.
ಭಾರತಕ್ಕೆ ಸೇರಿದ ಲಿಪುಲೇಖ್, ಕಾಲಾಪಾಣಿ ಮತ್ತು ಲಿಂಪಿಯಾಡುರಾ ಪ್ರದೇಶಗಳನ್ನೊಳಗೊಂಡು ತಯಾರಿಸಿದ ಪರಿಷ್ಕೃತ ನಕ್ಷೆಗೆ ನೇಪಾಳದ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ ಪರಿಷ್ಕೃತ ನಕ್ಷೆಯನ್ನು ಭಾರತ ತಿರಸ್ಕರಿಸಿತ್ತು.
ನವೆಂಬರ್2019ರಲ್ಲಿ ಭಾರತ ಹೊಸ ನಕ್ಷೆಯನ್ನು ಪ್ರಕಟಿಸಿದ ಆರು ತಿಂಗಳ ನಂತರ, ಉತ್ತರಾಖಂಡದ ಮೂರು ಆಯಕಟ್ಟಿನ ಪ್ರಮುಖ ಕ್ಷೇತ್ರಗಳ ಮೇಲೆ ಹಕ್ಕು ಸಾಧಿಸುವ ದೇಶದ ಪರಿಷ್ಕೃತ ರಾಜಕೀಯ ಮತ್ತು ಆಡಳಿತ ನಕ್ಷೆಯನ್ನು ನೇಪಾಳ ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.