ADVERTISEMENT

ಪಕ್ಷ ಕೈಗೊಂಡ ಶಿಸ್ತು ಕ್ರಮದ ನಿರ್ಣಯ ತಿರಸ್ಕರಿಸಿದ ನೇಪಾಳ ಪ್ರಧಾನಿ ಒಲಿ

ಒಲಿ ವಿರುದ್ಧ ಆಡಳಿತಾರೂಢ ಪಕ್ಷದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 11:20 IST
Last Updated 21 ಡಿಸೆಂಬರ್ 2020, 11:20 IST
ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ
ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ   

ಕಠ್ಮಂಡು: ಆಡಳಿತಾರೂಢ ಪಕ್ಷವುತಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಕೈಗೊಂಡ ನಿರ್ಣಯವನ್ನು ತಿರಸ್ಕರಿಸುವುದಾಗಿ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಹೇಳಿದ್ದಾರೆ.

ಸಂಸತ್‌ ವಿಸರ್ಜಿಸಿರುವುದು ಅಸಾಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ ಮತ್ತು ಸ್ವಾರ್ಥದ ಕ್ರಮವಾಗಿದೆ. ಹೀಗಾಗಿ, ಒಲಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಶಿಫಾರಸು ಮಾಡಿ ನೇಪಾಳದ ಆಡಳಿತಾರೂಢ ಕಮ್ಯೂನಿಸ್ಟ್‌ ಪಕ್ಷದ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಈ ನಿರ್ಣಯಕ್ಕೆ ಪ್ರತಿಕ್ರಿಯಿಸಿರುವ ಒಲಿ, ’ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಶಕ್ತಿಗಳ ಜತೆ ಸೇರಿ ನನ್ನ ವಿರುದ್ಧ ಸಂಚು ರೂಪಿಸಲಾಗಿತ್ತು. ಆದ್ದರಿಂದ, ಒತ್ತಡದ ಪರಿಸ್ಥಿತಿಯಲ್ಲಿ ಸಂಸತ್‌ ವಿಸರ್ಜಿಸಲಾಯಿತು’ ಎಂದು ಸಮರ್ಥಿಸಿಕೊಂಡಿದ್ದಾರೆ

ADVERTISEMENT

‘ಪಕ್ಷದ ನಿಯಮಗಳ ವಿರುದ್ಧವೇ ನನ್ನ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷದ ಸಭೆಯನ್ನು ನಾನೇ ಕರೆಯಬೇಕಾಗಿತ್ತು ಮತ್ತು ಅಧ್ಯಕ್ಷತೆಯನ್ನು ವಹಿಸಬೇಕಾಗಿತ್ತು. ಈಗ ನಡೆದಿರುವ ಸಭೆಯ ಅಧ್ಯಕ್ಷತೆಯನ್ನು ಇನ್ನೊಬ್ಬರು ವಹಿಸಿಕೊಂಡಿರುವುದರಿಂದ ನಿಯಮಗಳ ಪ್ರಕಾರ ಮಾನ್ಯತೆ ಇಲ್ಲ’ ಎಂದು ಹೇಳಿದ್ದಾರೆ.

‘ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರನ್ನು ವಾಗ್ದಾಂಡನೆಗೆ ಗುರಿಪಡಿಸುವ ಪ್ರಯತ್ನಗಳು ನಡೆದಿದ್ದವು ಮತ್ತು ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಯೋಜನೆ ರೂಪಿಸಲಾಗಿತ್ತು. ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಜನರ ಕ್ಷಮೆಯಾಚಿಸಿ ಹೊಸದಾಗಿ ಚುನಾವಣೆ ನಡೆಸಲೇಬೇಕಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.