ಟೆಲ್ ಅವಿಲ್(ಇಸ್ರೇಲ್): ಗಾಜಾದಲ್ಲಿ ನಾಲ್ಕೂವರೆ ತಿಂಗಳ ಮಟ್ಟಿಗೆ ಕದನ ವಿರಾಮ ಘೋಷಿಸುವ ಹಮಾಸ್ ಬಂಡುಕೋರರ ಪ್ರಸ್ತಾಪವನ್ನು ‘ಭ್ರಮೆ’ ಎಂದು ಕರೆದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, ಹಮಾಸ್ ವಿರುದ್ಧ ಸಂಪೂರ್ಣ ಜಯ ಸಾಧಿಸುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನೇತನ್ಯಾಹು, ‘ಹಮಾಸ್ ಭ್ರಮೆಯ ಬೇಡಿಕೆಗಳನ್ನು ನಂಬಿದರೆ ಒತ್ತಾಯಾಳುಗಳು ಬಿಡುಗಡೆಯಾಗುವುದಿಲ್ಲ ಬದಲಾಗಿ ಮತ್ತೊಂದು ಹತ್ಯಾಕಾಂಡವನ್ನು ಇದು ಆಹ್ವಾನಿಸುತ್ತದೆ’ ಎಂದರು.
‘ನಾವು ವಿಜಯದ ಹಾದಿಯಲ್ಲಿದ್ದೇವೆ. ಇನ್ನು ಕೆಲ ತಿಂಗಳುಗಳ ಕಾಲ ಕಾರ್ಯಾಚರಣೆ ಮುಂದುವರಿಯಲಿದೆ. ಯುದ್ಧ ಬಿಟ್ಟರೆ ಬೇರೆ ಯಾವುದೇ ದಾರಿಯಿಲ್ಲ’ ಎಂದು ಹೇಳಿದರು.
ಕತಾರ್ ಮತ್ತು ಈಜಿಪ್ಟ್ನ ಮಧ್ಯಸ್ಥಿಕೆದಾರರನ್ನು ಭೇಟಿ ಮಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಬುಧವಾರ ಇಸ್ರೇಲ್ಗೆ ಭೇಟಿ ನೀಡಿದ್ದು, ಹಮಾಸ್ನ ಕದನ ವಿರಾಮ ಪ್ರಸ್ತಾಪವನ್ನು ನೇತನ್ಯಾಹು ಜೊತೆ ಚರ್ಚಿಸಿದ್ದರು.
ಹಮಾಸ್ ಪ್ರಸ್ತಾಪವೇನು?
ಹಮಾಸ್ ಸಿದ್ಧಪಡಿಸಿರುವ ಪ್ರಸ್ತಾವನೆಯು ತಲಾ 45 ದಿನಗಳ ಮೂರು ಹಂತಗಳನ್ನು ಒಳಗೊಂಡಿದೆ. ಈ ಪ್ರಸ್ತಾವನೆಯ ಭಾಗವಾಗಿ, ಬಂಡುಕೋರರು ತಮ್ಮ ವಶದಲ್ಲಿ ಇರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಪ್ಯಾಲೆಸ್ಟೀನ್ ಕೈದಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಗಾಜಾದ ಮರುನಿರ್ಮಾಣ ಆಗಬೇಕು, ಇಸ್ರೇಲ್ ಪಡೆಗಳು ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಅದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.