ಮೈಡುಗುರಿ: ಕಳೆದ ವಾರ ವಾಯವ್ಯ ನೈಜೀರಿಯಾದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ್ದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ನೈಜೀರಿಯಾದ ಕ್ಯಾಟ್ಸಿನಾ ರಾಜ್ಯದ ರಾಜ್ಯಪಾಲರು ತಿಳಿಸಿದ್ದಾರೆ.
ಅಪಹರಣಕಾರರ ಜತೆ ಮಾತುಕತೆಯ ಬಳಿಕ ಭದ್ರತಾ ಅಧಿಕಾರಿಗಳು 344 ವಿದ್ಯಾರ್ಥಿಗಳನ್ನು ಕ್ಯಾಟ್ಸಿನಾಗೆ ಕರೆ ತರುತ್ತಿದ್ದಾರೆ. ಅಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಬಳಿಕ ಮಕ್ಕಳನ್ನು ಪೋಷಕರಿಗೆ ಒಪ್ಪಿಸಲಾಗುವುದು ಎಂದು ಕ್ಯಾಟ್ಸಿನಾದ ರಾಜ್ಯಪಾಲ ಅಮೀನು ಬೆಲ್ಲೊ ಮಸಾರಿ ಅವರು ಮಾಹಿತಿ ನೀಡಿದ್ದಾರೆ.
‘ನಾವು ಬಹುತೇಕ ಮಕ್ಕಳನ್ನು ಅಪಹರಣಕಾರರಿಂದ ಬಿಡುಗಡೆಗೊಳಿಸುವಲ್ಲಿ ಸಫಲರಾಗಿದ್ದೇವೆ’ ಎಂದು ಅವರು ಹೇಳಿದರು. ಆದರೆ ಸರ್ಕಾರವು ಅಪಹರಣಕಾರರಿಗೆ ಹಣ ನೀಡಿದೆಯೇ ಎಂಬುದರ ಬಗ್ಗೆ ಏನೂ ತಿಳಿಸಿಲ್ಲ.
ಮಕ್ಕಳ ಬಿಡುಗಡೆಯನ್ನು ಸ್ವಾಗತಿಸಿದ ನೈಜೀರಿಯಾದ ಅಧ್ಯಕ್ಷ ಮೊಹಮದ್ ಬುಹಾರಿ ಅವರು,‘ಇದು ಮಕ್ಕಳ ಕುಟುಂಬದವರು ಮಾತ್ರವಲ್ಲದೇ ಸಂಪೂರ್ಣ ದೇಶ ಮತ್ತು ಅಂತರರಾಷ್ಟ್ರೀಯ ಸಮುದಾಯಗಳಿಗೆ ದೊಡ್ಡ ಸಮಾಧಾನವನ್ನು ನೀಡಿದೆ’ ಎಂದರು.
ಕಳೆದ ವಾರ ಕ್ಯಾಟ್ಸಿನಾದ ಕಂಕಾರ ಗ್ರಾಮದ ಸರ್ಕಾರಿ ವಿಜ್ಞಾನ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳನ್ನು ಅಪಹರಿಸಲಾಗಿತ್ತು. ಈ ದಾಳಿಯ ಹೊಣೆಯನ್ನು ಬೊಕೊ ಹರಾಮ್ ಜಿಹಾದಿ ಗುಂಪು ವಹಿಸಿಕೊಂಡಿತ್ತು.ಜಿಹಾದಿ ಗುಂಪು ಪಾಶ್ಚಾತ್ಯ ಶಿಕ್ಷಣವನ್ನು ವಿರೋಧಿಸಿ ಈ ಕೃತ್ಯ ಎಸಗಿತ್ತು. ಈ ದಾಳಿಯ ವೇಳೆ ಶಾಲೆಯಲ್ಲಿ ಸುಮಾರು 800 ವಿದ್ಯಾರ್ಥಿಗಳಿದ್ದರು. ಅದರಲ್ಲಿ 330ಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.