
ಫೆಬ್ರುವರಿ 12ರಂದು ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯೂ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಿತು. ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷವು(ಬಿಎನ್ಪಿ) ಅಧಿಕಾರಕ್ಕೆ ಬಂದು ಪಕ್ಷದ ಅಧ್ಯಕ್ಷ ತಾರಿಖ್ ರೆಹಮಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ನಡುವೆ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರ ಪೈಕಿ ಏಕೈಕ ಹಿಂದೂ ನಿತಾಯಿ ರಾಯ್ ಚೌಧುರಿ.
1949ರ ಜನವರಿ 7ರಂದು ಬಾಂಗ್ಲಾದ ಮಗುರಾ ಜಿಲ್ಲೆಯ ಹಟಬಾರಿಯಾ ಎಂಬ ಗ್ರಾಮದಲ್ಲಿ ಜನಿಸಿದ ಚೌಧುರಿ, ಅಲೋಕ್ಡಿಯಾ ಪುಖುರಿಯಾ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದ್ದರು. ಬಳಿಕ, ಮಗುರಾದ ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಢಾಕಾ ವಿಶ್ವವಿದ್ಯಾಲಯದಲ್ಲಿ ಕಾನೂನು ಸ್ನಾತಕೋತ್ತರ ಪದವಿ ಪಡೆದರು. ಝುಮಾ ಎಂಬುವವರನ್ನು ವಿವಾಹವಾಗಿದ್ದ ಚೌಧುರಿ, ಮೂರು ಮಕ್ಕಳನ್ನು ಹೊಂದಿದ್ದಾರೆ. ಅವರ ಮಗ ದೇಬಶಿಶ್ ರಾಯ್ ಚೌಧುರಿ ಬಾಂಗ್ಲಾದೇಶ ಹೈಕೋರ್ಟ್ನ ನ್ಯಾಯಮೂರ್ತಿಯಾಗಿದ್ದಾರೆ.
ಅವರ ಮಗಳು ನಿಪುಣ್ ರಾಯ್ ಚೌಧುರಿ ಬಿಎನ್ಪಿ ಪಕ್ಷದಲ್ಲಿ ತೊಡಗಿಸಿಕೊಂಡಿದ್ದು, ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದಾರೆ. ಬಿಎನ್ಪಿಯ ಹಿರಿಯ ನಾಯಕ ಗಯೇಶ್ವರ್ ಚಂದ್ರ ರಾಯ್ ಅವರ ಮಗ ಅಮಿತಾವ್ ರಾಯ್ ಅವರನ್ನು ವಿವಾಹವಾಗಿದ್ದಾರೆ.
ಬಿಎನ್ಪಿಯ ಉಪಾಧ್ಯಕ್ಷರಾಗಿರುವ ಚೌಧುರಿ, ಮಗುರಾ–2 ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ದಿವಂಗತ ಖಲೇದಾ ಜಿಯಾ ಅವರ ಹಿರಿಯ ಸಲಹೆಗಾರರಾಗಿದ್ದ ಚೌಧುರಿ, 1988ರಲ್ಲಿ ಸಂಸತ್ತಿಗೆ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ವಿರುದ್ಧದ ಧ್ವನಿಯಾಗಿದ್ದ ಅವರು, ಅವಾಮಿ ಲೀಗ್ ಹಿಂದೂಗಳ ದೊಡ್ಡ ಶತ್ರು ಎಂದು ಪ್ರತಿಪಾದಿಸಿದ್ದರು.
1990ರಲ್ಲಿ ಹುಸೇನ್ ಮುಹಮ್ಮದ್ ಇರ್ಶಾದ್ ಸರ್ಕಾರದಲ್ಲಿ ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ಚೌಧುರಿ, ಇರ್ಶಾದ್ ಜಮಾನ ಮುಗಿದ ಬಳಿಕ ಬಿಎನ್ಪಿ ಸೇರಿದ್ದರು.
ಹಸೀನಾ ಅವರು ದೇಶಬಿಟ್ಟ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಸಂಸತ್ತಿನ 299 ಕ್ಷೇತ್ರಗಳ ಪೈಕಿ ಬಿಎನ್ಪಿ 212 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಅಲಂಗೀರ್, ಏಕೈಕ ಮಹಿಳಾ ಸಚಿವೆ ಅಫ್ರೋಜಾ ಖಾನಮ್ ರೀಟಾ ಮತ್ತು ಚಕ್ಮಾ ಬೌದ್ಧ ನಾಯಕ ದಿಪೇನ್ ದಿವಾನ್ ಅವರು ಸಂಪುಟದ ಇತರ ಸದಸ್ಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.