ADVERTISEMENT

ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದುಗೊಳಿಸಿದ ಪಾಕಿಸ್ತಾನ

ಭಾರತಕ್ಕೆ ಬರಬೇಕಿದ್ದ ಪ್ರಯಾಣಿಕರು ಅತಂತ್ರ

ಏಜೆನ್ಸೀಸ್
Published 8 ಆಗಸ್ಟ್ 2019, 10:58 IST
Last Updated 8 ಆಗಸ್ಟ್ 2019, 10:58 IST
   

ಇಸ್ಲಾಮಾಬಾದ್:ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರವು ರದ್ದು ಮಾಡಿರುವುದಕ್ಕೆ ಪ್ರತಿಯಾಗಿ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪಾಕಿಸ್ತಾನ ಗುರುವಾರ ರದ್ದುಗೊಳಿಸಿದೆ ಎಂದು ಅಲ್ಲಿನ ಸುದ್ದಿವಾಹಿನಿ ವರದಿ ಮಾಡಿದೆ.

ಭಾರತದ ಜೊತೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಹಾಕಲು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ರದ್ದುಪಡಿಸಲು ಪಾಕಿಸ್ತಾನ ಬುಧವಾರ ತೀರ್ಮಾನಿಸಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ನಿರ್ಧಾರ ಕೈಗೊಂಡಿದೆ.

ADVERTISEMENT

ರೈಲು ಸೇವೆ ರದ್ದುಗೊಳಿಸಿರುವುದನ್ನು ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ದೃಢಪಡಿಸಿದ್ದಾರೆ. ಆದರೆ, ಭಾರತ ಸರ್ಕಾರಕ್ಕೆ ಪಾಕಿಸ್ತಾನ ಈವರೆಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಪರಿಣಾಮವಾಗಿ ಪಂಜಾಬ್‌ನ ವಾಘಾ–ಅಟ್ಟಾರಿ ಗಡಿಯಲ್ಲಿ ಪ್ರಯಾಣಿಕರು ಪ್ರಯಾಣ ಮುಂದುವರಿಸಲು ಸಾಧ್ಯವಾಗದೆ ಬಾಕಿಯಾಗಿದ್ದಾರೆ.

ಅಟ್ಟಾರಿ ಅಂತರರಾಷ್ಟ್ರೀಯ ರೈಲು ನಿಲ್ದಾಣದವರೆಗೆ ತನ್ನ ಚಾಲಕ ಮತ್ತು ಗಾರ್ಡ್‌ ಅನ್ನು ಕಳುಹಿಸಿಕೊಡಲು ಪಾಕಿಸ್ತಾನ ನಿರಾಕರಿಸಿದೆ.

‘ಸಂಜೋತಾ ಎಕ್ಸ್‌ಪ್ರೆಸ್ ರೈಲನ್ನುಅಟ್ಟಾರಿ ರೈಲು ನಿಲ್ದಾಣದವರೆಗೆ ಕಳುಹಿಸಿಕೊಡಬೇಕಾದದ್ದು ಪಾಕಿಸ್ತಾನದ ಜವಾಬ್ದಾರಿ. ಆದರೆ, ನೆರೆ ರಾಷ್ಟ್ರ ಗುರುವಾರ ತನ್ನ ಕರ್ತವ್ಯ ನಿರ್ವಹಿಸಿಲ್ಲ’ ಎಂದುರೈಲು ನಿಲ್ದಾಣದ ಅಧೀಕ್ಷಕ ಅರವಿಂದ ಕುಮಾರ್ ಹೇಳಿದ್ದಾರೆ.‌

ಭದ್ರತೆಯ ನೆಪವೊಡ್ಡಿರುವ ಪಾಕಿಸ್ತಾನ ರೈಲನ್ನು ಭಾರತದ ಗಡಿಯೊಳಕ್ಕೆ ಕಳುಹಿಸಿಕೊಡುವ ಬದಲಾಗಿ, ಭಾರತದ ಕಡೆಯಿಂದ ಚಾಲಕನನ್ನು ಕಳುಹಿಸಿ ರೈಲನ್ನು ಕೊಂಡೊಯ್ಯಲಿ ಎಂದು ಹೇಳಿದೆ.

ವೀಸಾ ಇರುವ ಚಾಲಕ ಮತ್ತುಗಾರ್ಡ್‌ ಅನ್ನು ಕಳುಹಿಸಿ ರೈಲನ್ನು ಭಾರತದ ಗಡಿಯೊಳಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದುಅರವಿಂದ ಕುಮಾರ್ ತಿಳಿಸಿದ್ದಾರೆ.

ಭಾರತೀಯ ಸಿನಿಮಾ ಪ್ರದರ್ಶನಕ್ಕೆ ತಡೆ:ದೇಶದಲ್ಲಿಭಾರತದ ಸಿನಿಮಾಗಳನ್ನು ಪ್ರದರ್ಶಿಸುವುದಕ್ಕೂ ಪಾಕಿಸ್ತಾನ ತಡೆಯೊಡ್ಡಿದೆ. ಈ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿಶೇಷ ಸಹಾಯಕ ಫಿರ್ದಸ್ ಆಶಿಕ್ ಅವನ್ ನೀಡಿರುವ ಹೇಳಿಕೆಯನ್ನು ‘ಜ್ಯೋ ಇಂಗ್ಲಿಷ್’ ಟಿವಿ ಚಾನೆಲ್ ಪ್ರಸಾರ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.