ADVERTISEMENT

ರಾಹುಲ್ ಗಾಂಧಿ ಮಾವೋವಾದಿ ಚಿಂತನಾ ಕ್ರಮದ ಹಿಡಿತದಲ್ಲಿದ್ದಾರೆ: ರವಿಶಂಕರ್ ಪ್ರಸಾದ್

ಪಿಟಿಐ
Published 7 ಮಾರ್ಚ್ 2023, 10:26 IST
Last Updated 7 ಮಾರ್ಚ್ 2023, 10:26 IST
   

ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಥಿತಿ ಮತ್ತು ಆರ್‌ಎಸ್‌ಎಸ್ ಕುರಿತು ಬ್ರಿಟನ್‌ನಲ್ಲಿ ಟೀಕಿಸಿದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಅವರು ಸಂಪೂರ್ಣವಾಗಿ ಮಾವೋವಾದಿ ಚಿಂತನಾ ಕ್ರಮ ಮತ್ತು ಅರಾಜಕತಾವಾದಿ ಅಂಶಗಳ ಹಿಡಿತದಲ್ಲಿದ್ದಾರೆ ಎಂಬುದು ಸ್ಪಷ್ಟ ಎಂದು ಅದು ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ರಾಹುಲ್ ಆರೋಪಗಳನ್ನು ತಳ್ಳಿಹಾಕಿದರು. ಲಜ್ಜೆಗೇಡಿತನದಿಂದ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಲು ಬ್ರಿಟನ್ ಸಂಸತ್ತನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.

ADVERTISEMENT

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ,ಆಡಳಿತ, ಸಂಸತ್, ನ್ಯಾಯಾಂಗ ವ್ಯವಸ್ಥೆ ಮತ್ತು ಕಾರ್ಯತಂತ್ರದ ಭದ್ರತೆಯನ್ನು ವಿದೇಶಿ ನೆಲದದಲ್ಲಿ ಅವಮಾನಿಸಿದ್ದಾರೆ ಎಂದು ಅವರು ಟೀಕಿಸಿದರು.

ಬ್ರಿಟನ್ ಸಂಸದರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ರಾಹುಲ್, ಲೋಕಸಭಾದ ಮೈಕ್ರೊಫೋನ್‌ಗಳು ವಿರೋಧ ಪಕ್ಷಗಳು ಮಾತನಾಡುವಾಗ ಪದೇ ಪದೇ ಸ್ಥಗಿತಗೊಳಿಸಲಾಗುತ್ತದೆ ಎಮದು ಆರೋಪಿಸಿದ್ದರು.

ಭಾರತ ಸಂಜಾತ ಬ್ರಿಟನ್‌ನ ವಿರೋಧ ಪಕ್ಷ ಲೇಬರ್ ಪಕ್ಷದ ಹಿರಿಯ ಸಂಸದ ವೀರೇಂದ್ರ ಶರ್ಮಾ ಆಯೋಜಿಸಿದ್ದ ಹೌಸ್ ಆಫ್ ಕಾಮನ್ಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್, ಭಾರತದ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಪ್ರಮುಖ ವಿಷಯಗಳ ಕುರಿತಂತೆ ಚರ್ಚೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಆರೋಪಿಸಿದ್ದರು.

ಭಾರತದ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಯೂರೋಪ್ ಮತ್ತು ಅಮೆರಿಕವನ್ನು ಒತ್ತಾಯಿಸುವ ಮೂಲಕ ರಾಹುಲ್, ಭಾರತದ ಆಂತರಿಕ ವಿಷಯದಲ್ಲಿ ವಿದೇಶದ ಶಕ್ತಿಗಳು ಮಧ್ಯಪ್ರವೆಶಿಸಬಾರದೆಂಬ ನಿಯಮಗಳ ವಿರುದ್ಧ ಹೋಗಿದ್ದಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿಯ ಬೇಜವಾಬ್ದಾರಿ ಹೇಳಿಕೆ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿ ವಿವರಣೆ ನೀಡಬೇಕೆಂದು ಪ್ರಸಾದ್ ಒತ್ತಾಯಿಸಿದ್ದಾರೆ.

ಆರ್‌ಎಸ್ಎಸ್ ಕುರಿತ ರಾಹುಲ್ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.