ADVERTISEMENT

ಕಾಶ್ಮೀರದಲ್ಲಿ ಯಥಾ ಸ್ಥಿತಿ ಪುನಃಸ್ಥಾಪಿಸಿದರೆ ಭಾರತದೊಂದಿಗೆ ಮಾತುಕತೆ: ಇಮ್ರಾನ್

ಪಿಟಿಐ
Published 30 ಮೇ 2021, 16:39 IST
Last Updated 30 ಮೇ 2021, 16:39 IST
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್   

ಲಾಹೋರ್: ಜಮ್ಮು ಮತ್ತು ಕಾಶ್ಮೀರದಲ್ಲಿ 2019 ಆಗಸ್ಟ್ 5ರ ಹಿಂದಿನ ಯಥಾ ಸ್ಥಿತಿ ಪುನಃ ಸ್ಥಾಪಿಸಿದರೆ ಭಾರತದೊಂದಿಗೆ ಮಾತುಕತೆ ಪುನರಾರಂಭಿಸಲು ಸಿದ್ಧರಾಗಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿಯನ್ನು 2019 ಆಗಸ್ಟ್ 5ರಂದು ಭಾರತ ರದ್ದುಗೊಳಿಸಿತ್ತು. ಬಳಿಕ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು.

ಕಾಶ್ಮೀರದ ಪೂರ್ವ ಸ್ಥಿತಿಯ ಸ್ಥಾನಮಾನವನ್ನು ಪುನಃಸ್ಥಾಪಿಸದೇ ಭಾರತದೊಂದಿಗಿನ ಮಾತುಕತೆಯನ್ನು ಪುನರುಜ್ಜೀವನಗೊಳಿಸಿದರೆ ಅದು ಕಾಶ್ಮೀರದತ್ತ ಬೆನ್ನು ತಿರುಗಿಸಿದಂತೆ ಎಂದು ನೇರಪ್ರಶ್ನೋತ್ತರ ಅವಧಿಯಲ್ಲಿ ಇಮ್ರಾನ್ ಖಾನ್ ಹೇಳಿದ್ದಾರೆ.

ADVERTISEMENT

ಮಾತು ಮುಂದುವರಿಸಿದ ಪಾಕ್ ಪ್ರಧಾನಿ, ಭಾರತ ಕೈಗೊಂಡಿರುವ ಕ್ರಮವನ್ನು ಹಿಂಪಡೆದರೆ ಖಂಡಿತವಾಗಿಯೂ ಮಾತುಕತೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ದೇಶವು ತನ್ನ ಆಂತರಿಕ ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತ ಸರ್ಕಾರ ಪುನರುಚ್ಛರಿಸುತ್ತಲೇ ಬಂದಿದೆ. ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ರಹಿತ ವಾತಾವರಣದಲ್ಲಿ ನೆರೆಯ ರಾಷ್ಟ್ರದೊಂದಿಗೆ ಬಾಂಧವ್ಯ ಬಯಸುತ್ತಿದ್ದು, ಈ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಹೇಳಿದೆ.

2016ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆಸಿದ ದಾಳಿಯ ಬಳಿಕ ಉಭಯ ದೇಶಗಳ ನಡುವಣ ಸಂಬಂಧ ಹದೆಗೆಟ್ಟಿತ್ತು. ಉರಿ ಸೇನಾ ನೆಲೆಯ ಮೇಲೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ದಾಳಿ ನಡೆಸಿರುವುದು ಮತ್ತಷ್ಟು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು.

ಇದನ್ನೂ ಓದಿ:

ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾದರು. ಇದಕ್ಕೆ ಪ್ರತಿಯಾಗಿ ಭಾರತ ಸರ್ಜಿಕಲ್ ದಾಳಿ ನಡೆಸಿತ್ತು. ಜೈಷ್-ಇ-ಮೊಹಮ್ಮದ್ ಉಗ್ರ ನೆಲೆಯನ್ನು ಧ್ವಂಸಗೊಳಿಸಿತ್ತು.

ಕಳೆದ ಫೆಬ್ರವರಿ ತಿಂಗಳಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಪುನಃ ಸ್ಥಾಪಿಸಲು ಉಭಯ ದೇಶಗಳು ಒಪ್ಪಿಕೊಂಡ ಬಳಿಕ ದ್ವಿಪಕ್ಷೀಯ ಬಾಂಧವ್ಯದಲ್ಲಿ ಸುಧಾರಣೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.