
ಪಾಕಿಸ್ತಾನದ ವಾಯು ದಾಳಿಯಿಂದ ಧರೆಗುರುಳಿದ ಮನೆಗಳ ಅವಶೇಷಗಳಡಿ ಅಳಿದುಳಿದ ವಸ್ತುಗಳಿಗಾಗಿ ಭಾನುವಾರ ಹುಡುಕಾಟ ನಡೆಸಿದ ಅಫ್ಗಾನಿಯನ್ನರು
ಇಸ್ಲಾಮಾಬಾದ್: ದೇಶದಲ್ಲಿ ಇತ್ತೀಚೆಗೆ ನಡೆದ ಬಂಡುಕೋರರ ದಾಳಿಗೆ ಪ್ರತೀಕಾರವಾಗಿ ಅಫ್ಗಾನಿಸ್ತಾನದ ಕನಿಷ್ಠ ಏಳು ಭಯೋತ್ಪಾದಕ ಅಡಗುತಾಣಗಳ ಮೇಲೆ ವಾಯುದಾಳಿ ನಡೆಸಿದ್ದು, 70 ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಭಾನುವಾರ ಹೇಳಿದೆ.
ನಾಗರಿಕ ಮತ್ತು ಧಾರ್ಮಿಕ ಕೇಂದ್ರವನ್ನು ಗುರಿಯಾಗಿಸಿ ನಡೆಸಲಾದ ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಅಫ್ಗನ್ ಸರ್ಕಾರ ಎಚ್ಚರಿಸಿದೆ. ದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಹಲವರು
ಮೃತಪಟ್ಟಿದ್ದಾರೆ ಎಂದಿದೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಪ್ರದೇಶದಲ್ಲಿ ಶನಿವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬ ಸೈನಿಕ ಮೃತಪಟ್ಟಿದ್ದರು. ಈ ದಾಳಿಯನ್ನು ಅಫ್ಗಾನಿಸ್ತಾನ ಮೂಲದ ಭಯೋತ್ಪಾದಕ ನಾಯಕರ ನಿರ್ದೇಶನದಂತೆ ನಡೆಸ ಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.
‘ಭಯೋತ್ಪಾದಕ ಚಟುವಟಿಕೆಗಳಿಗೆ ಅಫ್ಗನ್ ನೆಲವನ್ನು ಬಳಸುವುದನ್ನು ತಡೆಯುವಂತೆ ಪದೇ ಪದೇ ಕೇಳಿಕೊಂಡರೂ, ತಾಲಿಬಾನ್ ಸರ್ಕಾರ ಅದನ್ನು ನಿಗ್ರಹಿಸುವಲ್ಲಿ ವಿಫಲವಾಗಿದೆ. ಹಾಗಾಗಿ, ಪಾಕ್–ಅಫ್ಗನ್ ಗಡಿ ಪ್ರದೇಶ ದಲ್ಲಿರುವ ತಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್ ಮತ್ತು ಅದರ ಅಂಗ ಸಂಸ್ಥೆ
ಗಳು ಹಾಗೂ ಇಸ್ಲಾಮಿಕ್ ಸ್ಟೇಟ್ ಆಫ್ ಖೊರಸಾನ್ ಪ್ರಾವಿನ್ಸ್ನ ಭಯೋತ್ಪಾದಕ ಶಿಬಿರಗಳು ಮತ್ತು ಅಡಗುತಾಣಗಳ ಮೇಲೆ ಗುಪ್ತಚರ ಆಧಾರಿತ ನಿಖರ ವಾಯುದಾಳಿಗಳನ್ನು ನಡೆಸಲಾಗಿದೆ’ ಎಂದು ಪಾಕಿಸ್ತಾನ ತಿಳಿಸಿದೆ.
ಇಸ್ಲಾಮಾಬಾದ್, ಬಜೌರ್, ಬನ್ನುಗಳಲ್ಲಿ ಈಚೆಗೆ ನಡೆದಿದ್ದ ಆತ್ಮಹತ್ಯಾ ಬಾಂಬ್ ಸ್ಫೋಟಗಳಿಗೆ ಪ್ರತೀಕಾರವಾಗಿ ಸೇನಾ ದಾಳಿ ನಡೆಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೃಢಪಡಿಸಿದೆ.
ಪಾಕಿಸ್ತಾನವು ಕಾಬೂಲ್ಗೆ ಕಠಿಣ ಎಚ್ಚರಿಕೆ ನೀಡಿದ್ದರೂ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನುನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮತ್ತು ಯೋಧರೊಬ್ಬರು ಶನಿವಾರ ಹುತಾತ್ಮರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.