ಇಸ್ಲಾಮಾಬಾದ್ (ಪಿಟಿಐ): ’ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದರೆ ಪಾಕಿಸ್ತಾನಕ್ಕೂ ಶ್ರೀಲಂಕಾದ ಪರಿಸ್ಥಿತಿ ಬರುತ್ತದೆ. ಪಾಕಿಸ್ತಾನವು ಶ್ರೀಲಂಕಾ ಆಗುವುದು ನನಗೆ ಬೇಕಿಲ್ಲ’ ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಮಾಜಿ ಸಚಿವ ಶೇಕ್ ರಶೀದ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಿನ ಸಮ್ಮಿಶ್ರ ಸರ್ಕಾರವು ದಿಕ್ಕಿಲ್ಲದಂತಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.
‘ಒಂದು ವೇಳೆ ಇಮ್ರಾನ್ ಅವರನ್ನು ಬಂಧಿಸಿದರೆ, ಈ ಸಂದರ್ಭವನ್ನು ಎದುರಿಸಲು ಪಾಕಿಸ್ತಾನ್ ತೆಹ್ರಿಕ್–ಇ–ಇನ್ಸಾಫ್ ಪಕ್ಷವು ಕಾರ್ಯತಂತ್ರವನ್ನು ರೂಪಿಸಿದೆ’ ಎಂದು ತಿಳಿಸಿದರು.
ಪಾಕಿಸ್ತಾನದ ಪ್ರಧಾನಿ ಶಾಹಬಾಝ್ ಷರೀಫ್, ಮಾಜಿ ಪ್ರಧಾನಿ ಇಮ್ರಾನ್ ಖಾನ್ ದೇಶದಲ್ಲಿ ಆಂತರಿಕ ಯುದ್ಧವನ್ನು ನಡೆಸಲು ಯೋಜಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಸರ್ಕಾರಿ ಸಂಸ್ಥೆಗಳ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಇಮ್ರಾನ್ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.