ADVERTISEMENT

ಐದು ಒಪ್ಪಂದಗಳಿಗೆ ಭಾರತ–ಬಾಂಗ್ಲಾ ಸಹಿ

ಬಾಂಗ್ಲಾ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 18:59 IST
Last Updated 27 ಮಾರ್ಚ್ 2021, 18:59 IST
ಬಾಂಗ್ಲಾದೇಶದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಶನಿವಾರ ಪ್ರಾರ್ಥನೆ ಸಲ್ಲಿಸಿದ ಮೋದಿ –ಪಿಟಿಐ ಚಿತ್ರ
ಬಾಂಗ್ಲಾದೇಶದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಶನಿವಾರ ಪ್ರಾರ್ಥನೆ ಸಲ್ಲಿಸಿದ ಮೋದಿ –ಪಿಟಿಐ ಚಿತ್ರ   

ಢಾಕಾ: ಸಂಪರ್ಕ, ವಾಣಿಜ್ಯ, ಮಾಹಿತಿ ತಂತ್ರಜ್ಞಾನ ಮತ್ತು ಕ್ರೀಡಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಬಾಂಗ್ಲಾದೇಶ ಶನಿವಾರ ಐದು ಒಡಂಬಡಿಕೆಗಳನ್ನು ಮಾಡಿಕೊಂಡಿವೆ.

ಇದೇ ವೇಳೆ ಪ್ರಧಾನಿ ಮೋದಿ ಅವರು ಬಾಂಗ್ಲಾದೇಶಕ್ಕೆ ಭಾರತದ 12 ಲಕ್ಷ ಕೋವಿಡ್‌ ಲಸಿಕೆಯನ್ನು ಉಡುಗೊರೆಯಾಗಿ ನೀಡುವುದರ ಸಂಕೇತವಾಗಿ ಪ್ರಾತಿನಿಧಿಕ ಪೆಟ್ಟಿಗೆಯನ್ನು ಬಾಂಗ್ಲಾದೇಶದ ಪ್ರಧಾನಿಗೆ ಹಸ್ತಾಂತರಿಸಿದರು.

ರೈಲಿಗೆ ಚಾಲನೆ: ಬಾಂಗ್ಲಾದೇಶದ ಢಾಕಾ ಮತ್ತು ಭಾರತದ ನ್ಯೂ ಜಲ್ಪೈಗುರಿ ಸಂಪರ್ಕಿಸುವ ಹೊಸ ಪ್ಯಾಸೆಂಜರ್‌ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು.

ADVERTISEMENT

ಮೋದಿ ಅವರು ಬಾಂಗ್ಲಾದೇಶ ಪ್ರವಾಸದ ಎರಡನೇ ದಿನವಾದ ಶನಿವಾರ ಎರಡು ಪ್ರಮುಖ ಹಿಂದೂ ದೇವಾಲ
ಯಗಳಿಗೆ ಭೇಟಿ ನೀಡಿ ಪ್ರಾರ್ಥಿಸಿದರು. ಇದೇ ವೇಳೆ ಶೇಖ್‌ ಮುಜಿಬುರ್ ರಹಮಾನ್ ಅವರ ‘ಬಂಗಬಂಧು’ ಸ್ಮಾರ
ಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

ಬಾಂಗ್ಲಾದೇಶದ ಈಶ್ವರಿಪುರ ಗ್ರಾಮದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನ ಹಾಗೂ ಆಧ್ಯಾತ್ಮ ಗುರು ಹರಿಚಂದ್‌ ಠಾಕೂರ್‌ ಅವರ ಜನ್ಮಸ್ಥಳವಾದ ಗೋಪಾಲ್‌ಗಂಜ್‌ನ ಒರಕಂಡಿಯಲ್ಲಿ ಇರುವ ದೇವಾಲಯದಲ್ಲಿ ಅವರು ಪ್ರಾರ್ಥಿಸಿದರು. ನೆರೆಯ ರಾಷ್ಟ್ರಗಳಲ್ಲಿರುವ 51 ಶಕ್ತಿ ಪೀಠಗಳಲ್ಲಿ ಒಂದಾಗಿರುವ ಜೆಶೋರೇಶ್ವರಿ ಕಾಳಿ ದೇವಾಲಯಕ್ಕೆ ಕೈಯಲ್ಲಿ ತಯಾರಿಸಿದ ಮುಕುಟವನ್ನು ದೇವಿಗೆ ಪ್ರಧಾನಿ ಅರ್ಪಿಸಿದರು.

‘ಈ ಮುಕುಟವನ್ನು ಚಿನ್ನ ಮತ್ತು ಬೆಳ್ಳಿಯ ಲೇಪನದಿಂದ ಮಾಡಲಾಗಿದ್ದು, ಮೂರು ವಾರಗಳಲ್ಲಿ ಕುಶಲಕರ್ಮಿಗಳು ತಯಾರಿಸಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಅವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಬಾಂಗ್ಲಾದೇಶ ಮತ್ತು ಅದರ ಗಡಿ ಭಾಗದಲ್ಲಿರುವ ಪ್ರದೇಶಗಳಿಂದ ಹಲವಾರು ಭಕ್ತರು ‘ಮಾ ಕಾಳಿ ಮೇಳ’ಕ್ಕಾಗಿ ದೇವಸ್ಥಾನಕ್ಕೆ ಆಗಮಿಸು ತ್ತಾರೆ. ಹಾಗಾಗಿ ಭಾರತವು ದೇವಸ್ಥಾನಕ್ಕೆ ಸಭಾಂಗಣವನ್ನು ನಿರ್ಮಿಸಿಕೊಡಲಿದೆ ಎಂದು ಅವರು ಹೇಳಿದರು.

ಮತುವಾ ಸಮುದಾಯದವರೊಂದಿಗೆ ಮಾತುಕತೆ: ಆಧ್ಯಾತ್ಮ ಗುರು ಹರಿಚಂದ್‌ ಠಾಕೂರ್‌ ಅವರ ಜನ್ಮಸ್ಥಳವಾದ ಗೋಪಾಲ್‌ಗಂಜ್‌ನ ಒರಕಂಡಿಯಲ್ಲಿ ಇರುವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮೋದಿ ಅವರು ಮತುವಾ ಸಮುದಾಯದ ಸದಸ್ಯರೊಂದಿಗೆ ಮಾತಕತೆ ನಡೆಸಿದರು.

ಒರಕಂಡಿಯಲ್ಲಿ ಒಂದು ಪ್ರಾಥಮಿಕ ಶಾಲೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇಲ್ಲಿನ ಬಾಲಕಿಯರ ಮಾಧ್ಯಮಿಕ ಶಾಲೆಯನ್ನು ನವೀಕರಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆ, ಐವರ ಸಾವು: ಮೋದಿ ಅವರ ಬಾಂಗ್ಲಾದೇಶ ಪ್ರವಾಸ ವಿರೋಧಿಸಿ ಇಸ್ಲಾಂ ಮೂಲಭೂತವಾದಿಗಳು ಶುಕ್ರವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಐವರು ಅಸುನೀಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.