ನಾಗಾಸಾಕಿ, (ಜಪಾನ್): ಅಣ್ವಸ್ತ್ರಗಳ ಬಳಕೆ ಹಾಗೂ ಶಸ್ತ್ರಾಸ್ತ್ರ ವಹಿವಾಟಿನ ವಿರುದ್ಧ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಭಾನುವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
‘ಬಣ್ಣಿಸಲಾಗದ ಭಯಾನಕ’ ಅಣುಬಾಂಬ್ ಸ್ಫೋಟಕ್ಕೆ ಸಿಲುಕಿ ಮೃತರಾದವರ ನೆನಪಿನ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಪೋಪ್ ಮಾತನಾಡಿದರು.
1945ರಲ್ಲಿ ನಡೆದ ಅಣುಬಾಂಬ್ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿದ ಪೋಪ್ ಫ್ರಾನ್ಸಿಸ್, ಭದ್ರತೆ, ಶಾಂತಿ ಹಾಗೂ ಸ್ಥಿರತೆಗೆ ಅಣ್ವಸ್ತ್ರಗಳು ಉತ್ತರ ಅಲ್ಲ. ಅಣ್ವಸ್ತ್ರಗಳು ಯಾವಾಗಲೂ ಅಪಾಯಕಾರಿ ಎಂದೂ ಹೇಳಿದ್ದಾರೆ.
ಹಿರೋಷಿಮಾದಲ್ಲಿ 1.4 ಲಕ್ಷ ಜನರನ್ನು ಬಲಿತೆಗೆದುಕೊಂಡ ಮೊದಲ ಅಣುಬಾಂಬ್ ಸ್ಫೋಟದ ಮೂರು ದಿನಗಳ ನಂತರ ನಾಗಾಸಾಕಿಯಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. ಈ ದುರಂತದಲ್ಲಿ 74 ಸಾವಿರ ಜನರು ಮೃತಪಟ್ಟಿದ್ದರು.
ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಜಪಾನ್ ಪ್ರವಾಸ ಕೈಗೊಂಡಿರುವ ಫ್ರಾನ್ಸಿಸ್ ಅವರು, ಈ ಸ್ಥಳವು ಅತ್ಯಂತ ಭಯಾನಕ ಮತ್ತು ನೋವಿನ ಯಾತನೆ ನೀಡುತ್ತಿದೆ. ಮನುಷ್ಯ ಮನುಷ್ಯನನ್ನೇ ಬಲಿ ತೆಗೆದುಕೊಂಡ ಕೃತ್ಯ ಅತ್ಯಂತ ಘಾಸಿ ಉಂಟು ಮಾಡುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.