ADVERTISEMENT

ಒತ್ತಡಕ್ಕೆ ಮಣಿದು ಪೈಲಟ್‌ ಬಿಡುಗಡೆ ಮಾಡಿಲ್ಲ: ಪಾಕ್‌

ಪಿಟಿಐ
Published 2 ಮಾರ್ಚ್ 2019, 19:57 IST
Last Updated 2 ಮಾರ್ಚ್ 2019, 19:57 IST
ಶಾ ಮಹಮ್ಮದ್ ಖುರೇಷಿ
ಶಾ ಮಹಮ್ಮದ್ ಖುರೇಷಿ   

ಇಸ್ಲಾಮಾಬಾದ್ : ಯಾವುದೇ ಒತ್ತಡ ಅಥವಾ ಬಲವಂತಕ್ಕೆ ಮಣಿದು ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಿಲ್ಲ ಎಂದು ಪಾಕಿಸ್ತಾನ ಹೇಳಿದೆ.

‘ಶಾಂತಿ ಸ್ಥಾಪನೆ ಉದ್ದೇಶದಿಂದ ನಮ್ಮ ಸೆರೆಯಲ್ಲಿದ್ದ ಭಾರತದ ಪೈಟಲ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಭಾರತ ಮತ್ತು ಅಂತರರಾಷ್ಟ್ರೀಯ ಒತ್ತಡದಿಂದ ಪೈಲಟ್‌ ಬಿಡುಗಡೆ ಮಾಡಲಾಗಿದೆ ಎಂಬ ವಾದವನ್ನು ಅವರು ಒಪ್ಪಲಿಲ್ಲ.

ADVERTISEMENT

ಬಿಬಿಸಿ ಉರ್ದು ವಾಹಿನಿಗೆ ನೀಡಿದ ಸಂದರ್ಶನ ಖುರೇಷಿ, ‘ನಿಮ್ಮ (ಭಾರತದ) ಕೊರಗನ್ನು ಹೆಚ್ಚಿಸಲು ಇಷ್ಟಪಡುವುದಿಲ್ಲ. ನಿಮ್ಮ ನಾಗರಿಕ ಸಂಕಟಪಡುವಂತೆ ಮಾಡುವುದಿಲ್ಲ. ನಮಗೆ ಶಾಂತಿ ಬೇಕು ಎಂಬ ವಿಚಾರವನ್ನು ಭಾರತಕ್ಕೆ ಅರ್ಥಮಾಡಿಸುವ ಉದ್ದೇಶ ನಮ್ಮದಾಗಿತ್ತು’ ಎಂದಿದ್ದಾರೆ.

‘ಪಾಕಿಸ್ತಾನದಲ್ಲಿ ಶಾಂತಿಗೆ ತಡೆಯೊಡ್ಡುವ ಶಕ್ತಿಗಳಿಗೆ ಅವಕಾಶವಿಲ್ಲ. ತೀವ್ರಗಾಮಿ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಯೋಜನೆ ರೂಪಿಸಿದ್ದೇವೆ’ ಎಂದಿದ್ದಾರೆ.

‘ಪಾಕಿಸ್ತಾನ ಹಿಂದಿನ ಘಟನೆಗಳನ್ನು ಕೆದಕುವುದಿಲ್ಲ. ಒಂದು ವೇಳೆ ಕೆದಕಿದರೆ ಪಠಾಣ್‌ಕೋಟ್, ಉರಿ, ಭಾರತದ ಸಂಸತ್‌ ಮೇಲಿನ ದಾಳಿ ಹೇಗಾದವು ಎಂದು ಕೆದಕಬೇಕಾಗುತ್ತದೆ. ಅದೊಂದು ದೀರ್ಘ ಕತೆಯಾಗುತ್ತದೆ’ ಎಂದು ಖುರೇಷಿ ಹೇಳಿದ್ದಾರೆ.

ಸೇನಾ ಆಸ್ಪತ್ರೆಯಲ್ಲಿ ಮಸೂದ್‌ಗೆ ಡಯಾಲಿಸಿಸ್‌

ಜೈಷ್–ಎ–ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸಾಧ್ಯತೆಯಿದೆ ಎಂದು ಭಾರತದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಆತ ನಿತ್ಯ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಷಿ ಶುಕ್ರವಾರ ಒಪ್ಪಿಕೊಂಡಿದ್ದರು. ‘ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಆದರೆ, ಅನಾರೋಗ್ಯದ ಕಾರಣ ಅವನು ಮನೆಯಿಂದ ಹೊರಬರುತ್ತಿಲ್ಲ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.