
‘ಸಾಗರ ಬಂಧು’ ಕಾರ್ಯಾಚರಣೆಯಡಿ ಭಾರತದ ಎನ್ಡಿಆರ್ಎಫ್ ಸಿಬ್ಬಂದಿ ಶ್ರೀಲಂಕಾದ ಪುಟ್ಟಲಂ ಪ್ರದೇಶದಲ್ಲಿ 9 ತಿಂಗಳ ಗರ್ಭಿಣಿಯನ್ನು ರಕ್ಷಿಸಿ ವೈದ್ಯಕೀಯ ನೆರವು ಒದಗಿಸಿದರು.
ಪಿಟಿಐ
ಕೊಲಂಬೊ/ಅಲವತುಗೋಡ (ಶ್ರೀಲಂಕಾ): ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ‘ದಿತ್ವಾ’ ಚಂಡಮಾರುತದಿಂದ ಉಂಟಾದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಈವರೆಗೆ 410 ಮಂದಿ ಮೃತಪಟ್ಟಿದ್ದು, 336 ಜನ ಕಾಣೆಯಾಗಿದ್ದಾರೆ.
4.07 ಲಕ್ಷ ಕುಟುಂಬಗಳ 14.66 ಲಕ್ಷ ಜನರು ಬಾಧಿತರಾಗಿದ್ದಾರೆ. 15 ಪ್ರಮುಖ ಸೇತುವೆಗಳು, 256 ರಸ್ತೆಗಳು ಹಾನಿಗೊಳಗಾಗಿವೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
ಸೇನಾ ಪಡೆ ಮತ್ತು ಪೊಲೀಸ್ ಇಲಾಖೆಯ ನೂರಾರು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮಣ್ಣಿನಡಿ ಸಿಲುಕಿರುವ ಜನರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ರಸ್ತೆ, ವಿದ್ಯುತ್ ಸಂಪರ್ಕ ಮರುಸ್ಥಾಪಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಮಾರಕ ಬಿರುಗಾಳಿ ಬೀಸಿದ್ದು, ಇಂಡೊನೇಷ್ಯಾ, ಮಲೇಷ್ಯಾ ಮತ್ತು ಥಾಯ್ಲೆಂಡ್ನ ಹೆಚ್ಚಿನ ಭಾಗಗಳನ್ನು ಧ್ವಂಸಗೊಳಿಸಿದೆ. ನೂರಾರು ಜೀವಗಳನ್ನು ಬಲಿ ಪಡೆದಿದೆ.
‘ದಿತ್ವಾ ಚಂಡಮಾರುತದಿಂದ ಉದ್ಭವಿಸಿರುವ ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವ ಕಾರ್ಯದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿದೆ’ ಎಂದು ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರ ಕಚೇರಿ ಮಂಗಳವಾರ ತಿಳಿಸಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಅನುರಾ ಕುಮಾರ ದಿಸ್ಸನಾಯಕೆ ಅವರ ಜೊತೆ ಮಾತನಾಡಿ ಚಂಡಮಾರುತದಿಂದಾದ ಅವಘಡಗಳಲ್ಲಿ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಭಾರತವು ಶ್ರೀಲಂಕಾ ಮತ್ತು ಅದರ ಜನರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಪುನರುಚ್ಚರಿಸಿದ್ದಾರೆ’ ಎಂದು ಹೇಳಿದೆ.
ದ್ವೀಪ ರಾಷ್ಟ್ರವು ವ್ಯಾಪಕ ಪ್ರವಾಹ ಭೂಕುಸಿತ ಮತ್ತು ಮೂಲಸೌಕರ್ಯ ನಾಶದಿಂದ ಸಂಕಷ್ಟಕ್ಕೆ ಸಿಲುಕಿದೆ. ಹಲವು ಜಿಲ್ಲೆಗಳು ಪ್ರತ್ಯೇಕಗೊಂಡಿವೆ. ಭಾರತವು ‘ಸಾಗರ ಬಂಧು’ ಕಾರ್ಯಾಚರಣೆಯಡಿ ಎನ್ಡಿಆರ್ಎಫ್ನ 80 ಸಿಬ್ಬಂದಿಯನ್ನು ದ್ವೀಪ ರಾಷ್ಟ್ರಕ್ಕೆ ಕಳುಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.