ADVERTISEMENT

₹ 200 ಕೋಟಿ ಮೌಲ್ಯದ ಸಹಾಯಹಸ್ತ: ಸ್ಟಾಲಿನ್‌ಗೆ ಕೃತಜ್ಞತೆ ಸಲ್ಲಿಸಿದ ಲಂಕಾ ಪ್ರಧಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮೇ 2022, 14:35 IST
Last Updated 22 ಮೇ 2022, 14:35 IST
ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ
ಶ್ರೀಲಂಕಾ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ   

ಬೆಂಗಳೂರು: ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾಗೆ ಭಾರತ ₹ 200 ಕೋಟಿ ಮೌಲ್ಯದ ಸಹಾಯಹಸ್ತವನ್ನು ನೀಡಿದ್ದು, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ಗೆ ಅಲ್ಲಿನ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಕೃತಜ್ಞತೆ ಸಲ್ಲಿಸಿದ್ದಾರೆ.

'ಭಾರತದಿಂದ ಇಂದು ₹ 200 ಕೋಟಿ ಮೌಲ್ಯದ ಹಾಲಿನ ಪುಡಿ, ಅಕ್ಕಿ ಮತ್ತು ವೈದ್ಯಕೀಯ ವಸ್ತುಗಳು ಸೇರಿದಂತೆ ಮತ್ತಿತರ ನೆರವಿನ ಸಾಮಾಗ್ರಿಗಳನ್ನು ಶ್ರೀಲಂಕಾ ಸ್ವೀಕರಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ ಅವರಿಗೆ ಮತ್ತು ನಮ್ಮನ್ನು ಬೆಂಬಲಿಸಿದ ಭಾರತೀಯರಿಗೆ ಕೃತಜ್ಞತೆಗಳು' ಎಂದು ರಾನಿಲ್‌ ವಿಕ್ರಮಸಿಂಘೆ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಕೊಲೊಂಬೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ಹಾಗೂ ಭಾರತೀಯ ಮೂಲದ ಶ್ರೀಲಂಕಾ ತಮಿಳರನ್ನು ಪ್ರತಿನಿಧಿಸುವ ಸಿಲೋನ್‌ ವರ್ಕಸ್‌ ಕಾಂಗ್ರೆಸ್‌ನ ಮುಖಂಡ ಸೆಂಥಿಲ್‌ ತೊಂಡಮನ್‌ ಅವರ ಸಹಕಾರಕ್ಕೆ ಪ್ರಧಾನಿ ರಾನಿಲ್‌ ಧನ್ಯವಾದ ಸಲ್ಲಿಸಿದ್ದಾರೆ.

ADVERTISEMENT

ಶ್ರೀಲಂಕಾಗೆ ತಮಿಳುನಾಡು ಸರ್ಕಾರವು ಒಟ್ಟು 40,000 ಮೆಟ್ರಿಕ್‌ ಟನ್‌ ಅಕ್ಕಿ, 500 ಮೆಟ್ರಿಕ್‌ ಟನ್‌ ಹಾಲಿನ ಪುಡಿ ಮತ್ತು ವೈದ್ಯಕೀಯ ಸಾಮಾಗ್ರಿಗಳ ನೆರವು ಒದಗಿಸುವುದಾಗಿ ಭರವಸೆ ನೀಡಿದೆ. ಇದರ ಮೊದಲ ಪ್ರಕ್ರಿಯೆಯಾಗಿ 9,000 ಮೆಟ್ರಿಕ್‌ ಟನ್‌ ಅಕ್ಕಿ, 50 ಮೆಟ್ರಿಕ್‌ ಟನ್‌ ಹಾಲಿನ ಪುಡಿ ಮತ್ತು 25 ಮೆಟ್ರಿಕ್‌ ಟನ್‌ಗೂ ಹೆಚ್ಚಿನ ವೈದ್ಯಕೀಯ ಸಾಮಾಗ್ರಿಗಳ ನೆರವನ್ನು ಶ್ರೀಲಂಕಾಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.