ಕೊಲೊಂಬೊ (ಪಿಟಿಐ): ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ದ್ವೀಪರಾಷ್ಟ್ರದಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ರಂಬುಕ್ಕಾನ ಎಂಬಲ್ಲಿ, ಇಂಧನದ ಬೆಲೆ ಏರಿಕೆ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದು, ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, 12 ಜನ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಕೆಗಲ್ಲೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ನಾಲ್ವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.
‘ಪ್ರತಿಭಟನಕಾರರು ರಂಬುಕ್ಕಾನದಲ್ಲಿ ರೈಲುಮಾರ್ಗ ತಡೆದು, ಕಲ್ಲು ತೂರುತ್ತಿದ್ದರು. ಪರಿಸ್ಥಿತಿಯನ್ನು ಹತೋಟಿ ತರುವ ಸಲುವಾಗಿ ಗುಂಡಿನ ಹಾರಿಸಬೇಕಾಯಿತು’ ಎಂದು ಪೊಲೀಸ್ ವಕ್ತಾರ ನಿಹಾಲ್ ತಲ್ದುವಾ ಹೇಳಿದ್ದಾರೆ.
ಶ್ರೀಲಂಕಾವು ಹಲವು ದಿನಗಳಿಂದ ಹಣದುಬ್ಬರದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ ಇತ್ತೀಚಿಗೆ ಇಂಧನದ ಬೆಲೆಯನ್ನು ಅಲ್ಲಿನ ಸರ್ಕಾರ ಹೆಚ್ಚಿಗೆ ಮಾಡಿತ್ತು. ಇದರಿಂದ ಆಕ್ರೋಶಗೊಂಡ ಜನರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ಧಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.