ಕೊಲಂಬೊ: ಶ್ರೀಲಂಕಾದಲ್ಲಿ ದೀರ್ಘ ಸಮಯದಿಂದ ಪರಿಹಾರವಾಗದೆ ಉಳಿದಿರುವ ತಮಿಳು ವಿಚಾರ ಮತ್ತು ವಿವಾದಾತ್ಮಕ 13ನೇ ತಿದ್ದುಪಡಿಯನ್ನು ಜಾರಿಗೆ ತರಲು ನೆರವಾಗಬೇಕು ಎಂದು ಕೋರಿ ಶ್ರೀಲಂಕಾದ ಉತ್ತರ ಭಾಗದ ಪ್ರಮುಖ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಹಿರಿಯ ಸಂಸದ ಆರ್.ಸಂಪತ್ತನ್ ನೇತೃತ್ವದ ಸಂಸದರ ನಿಯೋಗ ಮಂಗಳವಾರ ಇಲ್ಲಿ ಭಾರತದ ಹೈಕಮಿಷನರ್ ಗೋಪಾಲ್ ಬಗ್ಲಾಯ್ ಅವರನ್ನು ಭೇಟಿ ಮಾಡಿ ಪ್ರಧಾನಿಗೆ ಬರೆದ ಪತ್ರವನ್ನು ಹಸ್ತಾಂತರಿಸಿತು.
1987ರ ಭಾರತ–ಲಂಕಾ ಒಪ್ಪಂದದ ಮೇರೆಗೆ 13ನೇ ತಿದ್ದುಪಡಿಯನ್ನು ಮಾಡಲಾಗಿತ್ತು. ಇದು ಶ್ರೀಲಂಕಾದಲ್ಲಿ ತಮಿಳು ಸಮುದಾಯದವರಿಗೆ ಅಧಿಕಾರವನ್ನು ಒದಗಿಸುತ್ತದೆ. ಇದನ್ನು ಪೂರ್ತಿಯಾಗಿ ಜಾರಿಗೆ ತರಬೇಕು ಹಾಗೂ ಶೀಘ್ರ ಪ್ರಾಂತೀಯ ಮಂಡಳಿ ಚುನಾವಣೆ ನಡೆಸಬೇಕು ಎಂಬುದು ತಮಿಳರ ಆಗ್ರಹವಾಗಿದೆ. ಆದರೆ ಆಡಳಿತಾರೂಢ ಶ್ರೀಲಂಕಾ ಪೀಪಲ್ಸ್ ಪಾರ್ಟಿಯ ಬಹುಸಂಖ್ಯಾತ ಸಿಂಹಳ ಜನಪ್ರತಿನಿಧಿಗಳು ಶ್ರೀಲಂಕಾದ ಪ್ರಾಂತೀಯ ಮಂಡಳಿ ವ್ಯವಸ್ಥೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.