ಪ್ರಾತಿನಿಧಿಕ ಚಿತ್ರ
ಕೊಲೊಂಬೊ: ಭಾರತದ ಮೀನುಗಾರರು ನಮ್ಮ ಜಲ ಪ್ರದೇಶಕ್ಕೆ ಮೀನುಗಾರಿಕೆಗೆ ಬರುವುದನ್ನು ತಡೆಯಿರಿ ಎಂದು ಭಾರತ ಸರ್ಕಾರಕ್ಕೆ ಶ್ರೀಲಂಕಾ ಸರ್ಕಾರ ಮನವಿ ಮಾಡಿದೆ.
‘ಶ್ರೀಲಂಕಾದ ಜನರಿಗೆ ಮೀನುಗಾರಿಕೆಯೊಂದೇ ಜೀವನೋಪಾಯಕ್ಕೆ ಇರುವ ದಾರಿಯಾಗಿದೆ. ಅವರಿಗೆ ಬೇರೆ ಯಾವುದೇ ಉದ್ಯಮವಿಲ್ಲ. ಮನ್ನಾರ್ ಮತ್ತು ತಲೈಮನ್ನಾರ್ಗೆ ಹೋದರೆ ನೀವು ನೋಡಬಹುದು. ಭಾರತೀಯ ಮೀನುಗಾರರು ಅಲ್ಲಿಗೆ ತೆರಳುವುದನ್ನು ತಡೆಯುವುದರಿಂದ ಶ್ರೀಲಂಕಾದ ಜನರಿಗೆ ಇನ್ನಷ್ಟು ಸಹಾಯವಾಗುತ್ತದೆ ಎಂದು ಶ್ರೀಲಂಕಾದ ಬಂದರುಗಳು ಮತ್ತು ನಾಗರಿಕ ವಿಮಾನಯಾನ ಸಚಿವ ಬಿಮಲ್ ರಥನಾಯಕ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಶ್ರೀಲಂಕಾಕ್ಕೆ ಭೇಟಿ ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರದಿಂದ ಈ ಹೇಳಿಕೆ ಹೊರಬಿದ್ದಿದೆ.
ಎಲ್ಟಿಟಿಇ ಜತೆಗಿನ ದೇಶದ ಸಶಸ್ತ್ರ ಸಂಘರ್ಷದ ಸಮಯದಲ್ಲಿ ಉತ್ತರ ಶ್ರೀಲಂಕಾದ ಜನರಿಗೆ ಭಾರತವು ಹೆಚ್ಚಿನ ಸಹಾಯವನ್ನು ನೀಡಿದೆ. ಜನರನ್ನು ರಕ್ಷಣೆ ಮಾಡಿರುವುದಕ್ಕೆ ನಾವು ಭಾರತಕ್ಕೆ ಕೃತಜ್ಞರಾಗಿರುತ್ತೇವೆ ಎಂದು ರಥನಾಯಕ ತಿಳಿಸಿದ್ದಾರೆ.
ಶ್ರೀಲಂಕಾ ನೌಕಾಪಡೆಯು 2024 ರಲ್ಲಿ ಶ್ರೀಲಂಕಾದ ಜಲ ಸೀಮೆಯಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ 550 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಂಧಿಸಿದೆ. ಈ ವರ್ಷ 2025ರಲ್ಲಿ ಇಲ್ಲಿಯವರೆಗೆ 130 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.