ನವದೆಹಲಿ: ಭಾರತದಿಂದ ಕಳವಾದ ಸುಮಾರು 1,200 ವರ್ಷಗಳ ಪುರಾತನ ಬುದ್ಧನ ವಿಗ್ರಹವನ್ನು 20 ವರ್ಷಗಳ ಬಳಿಕ ಇಟಲಿಯಲ್ಲಿ ಪತ್ತೆ ಹಚ್ಚಲಾಗಿದೆ.
ಈ ಕುರಿತು ಮಿಲನ್ನಲ್ಲಿರುವ ಭಾರತೀಯ ದೂತವಾಸ ಕೇಂದ್ರ ಟ್ವೀಟ್ ಮಾಡಿದೆ.
ಅತ್ಯಂತ ವಿಶೇಷವಾದ 'ಅವಲೋಕಿತೇಶ್ವರ ಪದ್ಮಪಾಣಿ' ವಿಗ್ರಹವನ್ನು ಭಾರತದಿಂದ ಕಳವುಗೈದ 20 ವರ್ಷಗಳ ನಂತರ ಮರಳಿ ಪಡೆಯಲಾಗಿದೆ ಎಂದು ಹೇಳಿಕೊಂಡಿದೆ.
ದೇವಿಸ್ಥಾನ ಕುಂದಲಪುರ ದೇವಾಲಯದಲ್ಲಿ ಸುಮಾರು 1,200 ವರ್ಷಗಳ ಕಾಲ ವಿಗ್ರಹ ಉಳಿದುಕೊಂಡಿದ್ದು, 2000ನೇ ಇಸವಿಯಲ್ಲಿ ಭಾರತದಿಂದ ಅಕ್ರಮವಾಗಿ ಕದ್ದು ಕಳ್ಳಸಾಗಣೆ ಮಾಡಲಾಗಿತ್ತು.
ಈ ಕಲ್ಲಿನ ವಿಗ್ರಹವು 8ರಿಂದ 12ನೇ ಶತಮಾನದಷ್ಟು ಪುರಾತನವಾದುದ್ದು ಎಂದು ಅಂದಾಜಿಸಲಾಗಿದೆ.
ಬೌದ್ಧ ಧರ್ಮದಲ್ಲಿ ಅವಲೋಕಿತೇಶ್ವರನು ಎಲ್ಲ ಬುದ್ದರ ಕರುಣೆಯನ್ನು ಸಾಕಾರಗೊಳಿಸುವ ಬೋಧಿಸತ್ವವನ್ನು ಪ್ರತಿಪಾದಿಸುತ್ತದೆ.
ಈ ವಿಗ್ರಹವು ಫ್ರಾನ್ಸ್ನ ಕಲಾ ಮಾರುಕಟ್ಟೆಯಲ್ಲಿ ಸ್ವಲ್ಪ ಸಮಯ ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ. ಇಂಡಿಯಾ ಪ್ರೈಡ್ ಪ್ರಾಜೆಕ್ಟ್, ಸಿಂಗಾಪುರ ಹಾಗೂ ಲಂಡನ್ನ ಆರ್ಟ್ ರಿಕವರಿ ಇಂಟರ್ನ್ಯಾಷನಲ್ ವಿಗ್ರಹವನ್ನು ಪತ್ತೆ ಹಚ್ಚುವಲ್ಲಿ ನೆರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.