ADVERTISEMENT

ಅಲಾಸ್ಕದಲ್ಲಿ ಟ್ರಂಪ್‌, ಪುಟಿನ್‌ ಸಭೆ: ಆರ್ಥಿಕ ಒಪ್ಪಂದ ಕುರಿತು ಮಾತುಕತೆ ಸಾಧ್ಯತೆ

ಏಜೆನ್ಸೀಸ್
Published 15 ಆಗಸ್ಟ್ 2025, 20:55 IST
Last Updated 15 ಆಗಸ್ಟ್ 2025, 20:55 IST
ಡೊನಾಲ್ಡ್‌ ಟ್ರಂಪ್‌–ವ್ಲಾದಿಮಿರ್ ಪುಟಿನ್–ಎಎಫ್‌ಪಿ ಚಿತ್ರ
ಡೊನಾಲ್ಡ್‌ ಟ್ರಂಪ್‌–ವ್ಲಾದಿಮಿರ್ ಪುಟಿನ್–ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌/ಅಲಾಸ್ಕ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರು ಅಲಾಸ್ಕದಲ್ಲಿ ಶುಕ್ರವಾರ ಬಂದಿಳಿದರು. 

ರಷ್ಯಾ–ಉಕ್ರೇನ್‌ ನಡುವಿನ ಯುದ್ಧ ಕೊನೆಗಾಣಿಸಿ, ಕದನ ವಿರಾಮ ಘೋಷಿಸಲು ಅಂತಿಮ ಒಪ್ಪಂದಕ್ಕೆ ಬರುವ ಕುರಿತು ಇಲ್ಲಿ ನಡೆಯುವ ಸಭೆಯಲ್ಲಿ ಉಭಯ ನಾಯಕರು ಚರ್ಚಿಸಲಿದ್ದಾರೆ.

ಉಭಯ ನಾಯಕರು ಇಲ್ಲಿನ ಹಸ್ತಲಾಘವ ಮಾಡಿ, ಸಭೆ ನಡೆಯಲಿರುವ ಸಭಾಂಗಣದತ್ತ ಹೆಜ್ಜೆ ಹಾಕಿದರು.

ADVERTISEMENT

ಪುಟಿನ್‌ ಅವರ ಆಗಮನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ‘ಉಕ್ರೇನ್‌ ಮತ್ತು ರಷ್ಯಾ ನಡುವೆ ತ್ವರಿತವಾಗಿ ಕದನ ವಿರಾಮ ಘೋಷಣೆ ಆಗಬೇಕು ಎಂಬುದು ನನ್ನ ಬಯಕೆ. ಇಂದಿನ ಈ ಸಭೆಯಲ್ಲಿ ಇದು ಸಾಧ್ಯವಾಗಲಿದೆಯೇ ಎಂಬುದು ನನಗೆ ತಿಳಿಯದು’ ಎಂದು ಹೇಳಿದರು.

‘ಒಪ್ಪಂದ ಕುರಿತಂತೆ ಯಾವುದೇ ನಿರ್ದಿಷ್ಟವಾಗಿ ಯಾವುದೂ ನಿರ್ಧಾರವಾಗಿಲ್ಲ’ ಎನ್ನುವ ಮೂಲಕ ಅವರು, ಇಂದಿನ ಸಭೆ ಉದ್ದೇಶಿತ ಗುರಿ ಸಾಧಿಸುವಲ್ಲಿ ಸಫಲವಾಗುವ ಅನಿಶ್ಚಿತತೆ ಇರುವುದನ್ನು ಸೂಚ್ಯವಾಗಿ ಹೇಳಿದರು.

‘ಕದನ ವಿರಾಮಕ್ಕೆ ಒಂದು ವೇಳೆ ಪುಟಿನ್‌ ಅವರು ಒಪ್ಪದಿದ್ದಲ್ಲಿ ನಾನು ಸಭೆಯಿಂದ ಹೊರನಡೆಯುವುದು ಖಚಿತ’ ಎಂದು ವಿಮಾನದಲ್ಲಿ ಪ್ರಯಾಣಿಸುವ ವೇಳೆ, ಫಾಕ್ಸ್‌ ನ್ಯೂಸ್‌ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ಟ್ರಂಪ್‌ ಹೇಳಿದ್ದಾರೆ.

‘ಹೆಚ್ಚುವರಿ ಸುಂಕವೇ ಕಾರಣ’:

ಅಲಾಸ್ಕಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ‘ರಷ್ಯಾದಿಂದ ಎರಡನೇ ಅತಿ ಹೆಚ್ಚು ಕಚ್ಚಾತೈಲ ಖರೀದಿಸುತ್ತಿದ್ದ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದ ರಿಂದಲೇ, ರಷ್ಯಾವು–ಅಮೆರಿಕದ ಜೊತೆಗೆ ಮಾತುಕತೆಗೆ ಮುಂದಾಯಿತು’ ಎಂದು  ತಿಳಿಸಿದ್ದಾರೆ.

‘ನೀವು ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿದ್ದು, ನಿಮಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುವುದು ಎಂದು ಭಾರತಕ್ಕೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದೇ ರಷ್ಯಾ ಮಾತುಕತೆ ನಡೆಸಲು ಕಾರಣವಾಗಿದೆ’ ಎಂದು ‘ಫಾಕ್ಸ್‌’ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ
ಟ್ರಂಪ್ ತಿಳಿಸಿದ್ದಾರೆ. 

ಬದಲಾವಣೆ ಇಲ್ಲ: ‘ರಷ್ಯಾದಿಂದ ತೈಲ ಆಮದು ನಿಲ್ಲಿಸಿಲ್ಲ. ಭಾರತವೂ ಮುಂದೆಯೂ ಖರೀದಿಸಲಿದ್ದು, ಈ ನಿರ್ಧಾರದಲ್ಲಿ ಬದಲಾವಣೆಯಿಲ್ಲ’ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನ ಮುಖ್ಯಸ್ಥ ಎ.ಎಸ್‌. ಸಾಹ್ನಿ ತಿಳಿಸಿದ್ದಾರೆ.

ಯುದ್ಧ ತಪ್ಪಿಸಿದ್ದು ನಾನೇ; ಟ್ರಂಪ್‌ ಪುನರುಚ್ಚಾರ
‘ಭಾರತ–ಪಾಕ್‌ ನಡುವೆ ಅಣ್ವಸ್ತ್ರ ಯುದ್ಧ ನಡೆಯುವ ಸಾಧ್ಯತೆ ಇದ್ದು ಅದನ್ನು ನಾನೇ ತಪ್ಪಿಸಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಒವಲ್‌ ಕಚೇರಿಯಲ್ಲಿ ಮಾತನಾಡಿದ ಅವರು ‘ನೀವು ಭಾರತ ಹಾಗೂ ಪಾಕಿಸ್ತಾನವನ್ನು ಒಮ್ಮೆ ಗಮನಿಸಿ. ವಿಮಾನಗಳನ್ನು ಗಾಳಿಯಲ್ಲಿ ಹೊಡೆದುರುಳಿಸಲಾಯಿತು. ಆರರಿಂದ ಏಳು ವಿಮಾನಗಳು ಕೆಳಕ್ಕುರುಳಿದವು. ಅವರು ಅಣ್ವಸ್ತ್ರ ಯುದ್ಧಕ್ಕೂ ಮುಂದಾಗಿದ್ದರು ನಾವು ಸಮಸ್ಯೆಯನ್ನು ಬಗೆಹರಿಸಿದೆವು’ ಎಂದು ಹೇಳಿದ್ದಾರೆ.
ಜಾಗತಿಕ ವ್ಯವಹಾರದಲ್ಲಿ ಭಾರತದ ಪ್ರಾಬಲ್ಯ: ವ್ಲಾದಿಮಿರ್‌ ಪುಟಿನ್ ಶ್ಲಾಘನೆ
ಮಾಸ್ಕೋ: ‘ಜಾಗತಿಕ ವ್ಯವಹಾರಗಳಲ್ಲಿ ಭಾರತವು ಸ್ಪಷ್ಟವಾದ ಪ್ರಾಬಲ್ಯ ಹೊಂದಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಪ್ರಮುಖ ವಿಚಾರಗಳಲ್ಲಿ ಭಾರತವು ಸಕ್ರಿಯ ಪಾತ್ರವನ್ನು ಉಲ್ಲೇಖಿಸಿ ಈ ಅಭಿಪ್ರಾಯಪಟ್ಟಿದ್ದಾರೆ. ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂದೇಶ ಕಳುಹಿಸಿರುವ ಅವರು ‘ಎರಡು ರಾಷ್ಟ್ರಗಳ ನಡುವೆ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ರಷ್ಯಾ ಬದ್ಧವಾಗಿದೆ’ ಎಂದು ಪುಟಿನ್‌ ಒತ್ತಿ ಹೇಳಿದ್ದಾರೆ. ‘ಜಾಗತಿಕ ವ್ಯವಹಾರಗಳಲ್ಲಿ ಭಾರತವು ಸ್ಪಷ್ಟವಾದ ಪ್ರಾಬಲ್ಯ ಹೊಂದಿದೆ. ಹಲವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಸಕ್ರಿಯವಾಗಿ  ಭಾಗವಹಿಸಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.