ಪ್ಯಾರಿಸ್: ಜಾಗತಿಕ ತಾಪಮಾನ ಏರಿಕೆಯು ಮಾನವನ ಸಂಕಟ ಹಾಗೂ ಪರಿಸರ ವಿಪತ್ತುಗಳಿಗೆ ಕಾರಣವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯುವುದು ಜಾಗತಿಕ ತಾಪಮಾನ ನಿಯಂತ್ರಣದ ಅನಾಹುತ ತಡೆಗೆ ಇರುವ ಏಕೈಕ ಮಾರ್ಗ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ವಿಶ್ವಸಂಸ್ಥೆಯು 10,000 ಪುಟಗಳ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಜಾಗತಿಕ ತಾಪಮಾನ ಏರಿಕೆಗೆ ಮಾನವ ಚಟುವಟಿಕೆಗಳೇ ಕಾರಣವಾಗಿದ್ದು, ಭೂಮಿಯ ತಾಪವು ಕೈಗಾರಿಕಾ ಪೂರ್ವದ 1.1 ಡಿಗ್ರಿಯಷ್ಟು ಹೆಚ್ಚಾಗಿದೆ. ಪಳೆಯುಳಿಕೆ ಇಂಧನಗಳಿಂದ ಬಿಡುಗಡೆಯಾಗುವ ಕಾರ್ಬನ್ ಡೈ ಆಕ್ಸೈಡ್ ತಾಪಮಾನ ಏರಿಕೆಯ ಪ್ರಮುಖ ಅಂಶವಾಗಿದ್ದು, 1900 ರಿಂದ 2019ರ ಅವಧಿಯಲ್ಲಿ ತಾಪವು ಕನಿಷ್ಠ 10 ಪಟ್ಟು ವೇಗವಾಗಿ ಹೆಚ್ಚಿದೆ.
ಪ್ಯಾರಿಸ್ ಒಪ್ಪಂದದಂತೆ ಎಲ್ಲಾ ದೇಶಗಳು ಮಾಲಿನ್ಯಕಾರಕ ಅನಿಲ ನಿಯಂತ್ರಣಕ್ಕೆ ಮುಂದಾಗದಿದ್ದರೆ, 2 ಡಿಗ್ರಿ ಸೆಲ್ಸಿಯಸ್ನೊಳಗೆ ತಾಪವಿದ್ದರೂ, ಗಂಭೀರ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಸ್ತುತ ಇರುವ ರಾಷ್ಟ್ರೀಯ ನೀತಿಗಳಿಂದ 2100ರ ಇಸವಿ ವೇಳೆಗೆ ಭೂಮಿಯ ತಾಪ 3.2 ಡಿಗ್ರಿ ಸೆಲ್ಸಿಯಸ್ಗೆ ಜಿಗಿಯಲಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.