ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನ ದಿನದ ಮಟ್ಟಿಗೆ ತನ್ನ ವಶದಲ್ಲಿಟ್ಟುಕೊಂಡಿದ್ದ ಭಾರತೀಯ ಹೈಕಮಿಷನ್ನ ಇಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿದೆ, ಅಪಘಾತ ಪ್ರಕರಣವೊಂದರಲ್ಲಿ ತಾವು ಭಾಗಿಯಾಗಿರುವುದಾಗಿ ಒಪ್ಪಿಕೊಳ್ಳುವಂತೆ ಸಿಬ್ಬಂದಿಯನ್ನು ಹಿಂಸಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಹೈಕಮಿಷನ್ನಲ್ಲಿ ಚಾಲಕರಾಗಿರುವ ಇಬ್ಬರು ಸಿಬ್ಬಂದಿ ಸೋಮವಾರ ಬೆಳಗ್ಗೆ ಕರ್ತವ್ಯದಲ್ಲಿರುವಾಗಲೇ ನಾಪತ್ತೆಯಾಗಿದ್ದರು. ಈ ಇಬ್ಬರನ್ನೂ ಪಾಕಿಸ್ತಾನದ ಪೊಲೀಸರು ಬಂಧಿಸಿರುವುದಾಗಿ ನಂತರ ತಿಳಿದಿತ್ತು. ಸಂಜೆ ಹೊತ್ತಿಗೆ ಇಬ್ಬರನ್ನೂ ಬಿಡುಗಡೆ ಮಾಡಲಾಗಿತ್ತು.
ಹೈಕಮಿಷನ್ಗೆ ಸಮೀಪವಿರುವ ಪೆಟ್ರೋಲ್ ಬಂಕ್ನಲ್ಲಿ ಸೋಮವಾರ ಬೆಳಗ್ಗೆ 8: 30-45 ಸುಮಾರಿನಲ್ಲಿ 15 ರಿಂದ 16 ಮಂದಿ ಶಸ್ತ್ರಸಜ್ಜಿತರು ಸಿಬ್ಬಂದಿಯನ್ನು ಬಂಧಿಸಿ, ಅಪರಿಚತ ಸ್ಥಳಕ್ಕೆ ಕರೆದೊಯ್ದಿದ್ದರು ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಅಪಘಾತವೊಂದರಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಸಿಬ್ಬಂದಿಯಿಂದ ಒತ್ತಾಯಪೂರ್ವಕವಾಗಿ ಹೇಳಿಸಲಾಗಿದೆ. ಅಲ್ಲದೆ, ಭಾರತೀಯ ಹೈಕಮಿಷನ್ಗೆ ಹೊರಗಿನ ವ್ಯಕ್ತಿಗಳನ್ನು ಕರೆದುಕೊಂಡು ಬರುವಂತೆ ಅಲ್ಲಿನ ಗುಪ್ತಚರ ಅಧಿಕಾರಿಗಳು ತಮ್ಮನ್ನು ಒತ್ತಾಯಿಸುತ್ತಾರೆ ಎಂದು ಬಲವಂತವಾಗಿ ಹೇಳಿಸಿದ್ದಾರೆ. ಇದನ್ನು ವಿಡಿಯೊ ಕೂಡ ಮಾಡಿಕೊಳ್ಳಲಾಗಿದೆ,’ ಎಂದು ಎಎನ್ಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಇಬ್ಬರೂ ಸಿಬ್ಬಂದಿನ್ನು ಸುಮಾರು 14.00 ಗಂಟೆಗಳವರೆಗೆ ವಿಚಾರಣೆಗೊಳಪಡಿಸಲಾಗಿದೆ, ಈ ಅವಧಿಯಲ್ಲಿ ಅವರನ್ನು ಪದೇ ಪದೇ ಸರಳುಗಳು, ದೊಣ್ಣೆಗಳಿಂದ ಹೊಡೆಯಲಾಗಿದೆ. ಕೈಗಳಿಂದ ಗುದ್ದಲಾಗಿದೆ. ಕೊಳಕು ನೀರನ್ನು ಕುಡಿಯುವಂತೆ ಮಾಡಲಾಗಿದೆ. ಭಾರತೀಯ ಹೈಕಮಿಷನ್ನ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ದಿಷ್ಟ ಪಾತ್ರ ಮತ್ತು ಕಾರ್ಯದ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಕಲೆಹಾಕುವ ಪ್ರಯತ್ನಗಳು ನಡೆದಿವೆ,’ ಎಂದು ಹೇಳಲಾಗಿದೆ.
ಸೆಲ್ವದಾಸ್ ಪಿ. ಮತ್ತು ಡಿ.ಬ್ರಹ್ಮ ಅವರೇ ಪೊಲೀಸರು ವಶಕ್ಕೆ ಪಡೆದ ಸಿಬ್ಬಂದಿ ಎಂದು ಪಾಕಿಸ್ತಾನದ ಮಾಧ್ಯಮ ವರದಿಗಳಲ್ಲಿ ಗುರುತಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.