ಲಂಡನ್ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಟೈಗರ್ ಹನೀಫ್ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಸಲ್ಲಿಸಲಾಗಿದ್ದ ಕೋರಿಕೆಯನ್ನು ಬ್ರಿಟನ್ ಸರ್ಕಾರ ತಿರಸ್ಕರಿಸಿದೆ.
1993ರಲ್ಲಿ ಸೂರತ್ನಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ ಎಂದು ಆರೋಪಿಸಲಾಗಿದೆ.
ಹನೀಫ್ನ ಪೂರ್ಣ ಹೆಸರು ಮೊಹಮ್ಮದ್ ಹನೀಫ್ ಉಮರ್ಜಿ ಪಟೇಲ್. ಈತನನ್ನು ಬಾಲ್ಟನ್ನ ದಿನಸಿ ಅಂಗಡಿಯಲ್ಲಿ ಪತ್ತೆ ಮಾಡಲಾಗಿತ್ತು. 2010ರ ಫೆಬ್ರುವರಿಯಲ್ಲಿ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಈತನನ್ನು ಬಂಧಿಸಿದ್ದರು.
ಬ್ರಿಟನ್ನಲ್ಲೇ ನೆಲೆಸುವ ಹನೀಫ್ನ ಹಲವು ಪ್ರಯತ್ನಗಳು ವಿಫಲವಾಗಿದ್ದವು. ಭಾರತಕ್ಕೆ ಹಸ್ತಾಂತರಿಸಿದರೆ ತನಗೆ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ಈತ ಪ್ರತಿಪಾದಿಸಿದ್ದ. ಆದರೆ, ಈ ಹಿಂದೆ ಗೃಹ ಕಾರ್ಯದರ್ಶಿಯಾಗಿದ್ದ ಸಜಿದ್ ಜಾವೀದ್ ಅವರಿಗೆ ಸಲ್ಲಿಸಿದ್ದ ಮನವಿಯಿಂದ ಹನೀಫ್ ಯಶಸ್ಸು ಸಾಧಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸಜಿದ್ ಜಾವೀದ್ ಪಾಕಿಸ್ತಾನ ಮೂಲದವರು.
‘ಹನೀಫ್ ಪಟೇಲ್ನನ್ನು ಹಸ್ತಾಂತರಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಈ ಹಿಂದಿನ ಗೃಹ ಕಾರ್ಯದರ್ಶಿ ತಿರಸ್ಕರಿಸಿದ್ದಾರೆ. 2019ರ ಆಗಸ್ಟ್ನಲ್ಲಿ ಪಟೇಲ್ ನ್ಯಾಯಾಲಯದಿಂದ ಬಿಡುಗಡೆ ಹೊಂದಿದ್ದಾನೆ’ ಎಂದು ಬ್ರಿಟನ್ ಗೃಹ ಇಲಾಖೆ ಕಚೇರಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.