ADVERTISEMENT

ವಿಶ್ವಸಂಸ್ಥೆಯ ಸಾಮಾನ್ಯ ಸಭೆ: ಅಧ್ಯಕ್ಷ ಸಬಾ ಕೊರೊಸಿ ಜ.29ಕ್ಕೆ ಭಾರತ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 13:41 IST
Last Updated 18 ಜನವರಿ 2023, 13:41 IST
ಜೈಶಂಕರ್ ಮತ್ತು ಸಬಾ ಕೊರೊಸಿ
ಜೈಶಂಕರ್ ಮತ್ತು ಸಬಾ ಕೊರೊಸಿ   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದ ಅಧ್ಯಕ್ಷ ಸಬಾ ಕೊರೊಸಿ ಅವರು ಇದೇ ತಿಂಗಳ 29ರಂದು ಭಾರತಕ್ಕೆ ಭೇಟಿ ನೀಡಲಿದ್ದು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಕೊರೊಸಿ ಅವರು ವಿಶ್ವ ವ್ಯವಹಾರಗಳ ಭಾರತೀಯ ಮಂಡಳಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ, ಹಿರಿಯ ಸರ್ಕಾರಿ ಅಧಿಕಾರಿ ಹಾಗೂ ವಿಜ್ಞಾನಿಗಳನ್ನು ಭೇಟಿ ಮಾಡಲಿದ್ದಾರೆ. ಜಲ ಸಂರಕ್ಷಣಾ ಯೋಜನೆಗೂ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ನೀತಿ ಜನರಲ್ ಅಸೆಂಬ್ಲಿಯ ವಕ್ತಾರ ಪೌಲಿನಾ ಕುಬಿಯಾಕ್ ತಿಳಿಸಿದ್ದಾರೆ.

ಭಾರತದಿಂದ, ಅವರು ಚೀನಾಕ್ಕೆ ಪ್ರಯಾಣಿಸಲಿದ್ದಾರೆ ಎಂದು ಕುಬಿಯಾಕ್ ಹೇಳಿದ್ದಾರೆ.

ADVERTISEMENT

ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರನ್ನು ಭೇಟಿ ಮಾಡಿದ ಕೊರೊಸಿ, ದೇಶದ ಗುರಿಗಳು ಮತ್ತು ಸುಧಾರಿತ ಬಹುಪಕ್ಷೀಯತೆಯ ಪ್ರಾಮುಖ್ಯತೆಯ ಬಗ್ಗೆ ಚರ್ಚೆ ನಡೆಸಿದ್ದರು. ಈ ಸಭೆಯ ನಂತರ, ‘ಜೈಶಂಕರ್ ಅವರನ್ನು ಭೇಟಿಯಾಗಲು ಯಾವಾಗಲೂ ಸಂತಸವಾಗುತ್ತದೆ’ ಎಂದು ಕೊರೊಸಿ ಟ್ವೀಟ್ ಮಾಡಿದ್ದರು.

ಜೈಶಂಕರ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಮತ್ತು ಕೊರೊಸಿ ಅವರು ಕಳೆದ ತಿಂಗಳು ಯುಎನ್ ಪ್ರಧಾನ ಕಚೇರಿಯಲ್ಲಿನ ನಾರ್ತ್ ಲಾನ್ಸ್‌ನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

ಮುಂದಿನ ಜಿ20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.