ಯಾಂಗೂನ್: ಮ್ಯಾನ್ಮಾರ್ ಮಿಲಿಟರಿ ಆಡಳಿತವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಜನರ ವಿರುದ್ಧ ನಡೆಸಿದ ಗುಂಡಿನ ದಾಳಿಯಲ್ಲಿ 18 ಮಂದಿ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಾರ್ಯಾಲಯವುತಿಳಿಸಿದೆ.
ಮಿಲಿಟರಿ ದಂಗೆ ವಿರೋಧಿಸಿ ಮತ್ತು ಚುನಾಯಿತ ನಾಯಕಿ ಆಂಗ್ ಸಾನ್ ಸೂಕಿ ಬಿಡುಗಡೆಗಾಗಿ ಭಾನುವಾರದಂದು ಪ್ರತಿಭಟನಾಕಾರರು ಬೀದಿಗಿಳಿದಿದ್ದರು. ಅನೇಕ ಸಂಖ್ಯೆಯಲ್ಲಿ ಜಮಾಯಿಸಿದ ಜನರು ಮಿಲಿಟರಿ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಯಾಂಗೂನ್, ದಾವೆ, ಮಾಂಡಲೆ, ಮೈಯಿಕ್, ಬಾಗೊ ಮತ್ತು ಪೊಕೊಕ್ಕು ಪ್ರದೇಶಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಹಲವು ಕಡೆಗಳಲ್ಲಿ ಅಶ್ರುವಾಯು ಹಾಗೂ ಜಲ ಫಿರಂಗಿಗಳನ್ನು ಪ್ರಯೋಗಿಸಲಾಗಿದೆ.
ಮ್ಯಾನ್ಮಾರ್ ಪ್ರತಿಭಟನೆಯಲ್ಲಿ ಸಂಭವಿಸಿದ ಹಿಂಸಾಚಾರವನ್ನು ಖಂಡಿಸಿರುವ ವಕ್ತಾರ ರವೀನಾ ಶಮ್ದಾಸಾನಿ, ಶಾಂತಿಯುತ ಪ್ರತಿಭಟನೆಯ ವಿರುದ್ಧ ಮಿಲಿಟರಿ ಬಲಪ್ರಯೋಗವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಸಂತಾಪ ಸೂಚಿಸಿದ ಭಾರತೀಯ ರಾಯಭಾರ ಕಚೇರಿ...
ಮಿಲಿಟರಿ ದಂಗೆ ವಿರುದ್ಧ ನಡೆದ ಹಿಂಸಾಚಾರದಲ್ಲಿ 18 ಮಂದಿ ಮೃತಪಟ್ಟಿರುವ ಕುರಿತು ಮ್ಯಾನ್ಮಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತಾಪವನ್ನು ಸೂಚಿಸಿದೆ.
ಅಲ್ಲದೆ ಶಾಂತಿಯುತ ಮಾತುಕತೆಯ ಮೂಲಕಬಿಕ್ಕಟ್ಟನ್ನು ಇತ್ಯರ್ಥಗೊಳಿಸುವಂತೆ ಕೋರುತ್ತೇವೆ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.