ವಾಷಿಂಗ್ಟನ್ : ಭಾರತ– ಚೀನಾದ ವಾಸ್ತವ ಗಡಿ ರೇಖೆಯಲ್ಲಿ (ಎಲ್ಎಸಿ) ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಮಂಡಿಸಲಾದ ನಿರ್ಣಯವನ್ನುಅಮೆರಿಕ ಕಾಂಗ್ರೆಸ್ ಅಂಗೀಕರಿಸಿದೆ.
ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆ (ಎನ್ಡಿಎಎ) ತಿದ್ದುಪಡಿ ನಂತರ ಮಸೂದೆಯನ್ನು ಉಭಯ ಸದನಗಳು ಮಂಗಳವಾರ ಅಂಗೀಕರಿಸಿವೆ. ಭಾರತದ ಗಾಲ್ವನ್ ಕಣಿವೆಯಲ್ಲಿ ಚೀನಾ ತೋರಿದ ಆಕ್ರಮಣಕಾರಿ ಪ್ರವೃತ್ತಿ ಮತ್ತು ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಗಡಿ ತಗಾದೆಗಳನ್ನು ಮಸೂದೆ ಖಂಡಿಸಿದೆ.
‘ಮಸೂದೆಯನ್ನು ಅಂಗೀಕರಿಸಿರುವ ಕಾಂಗ್ರೆಸ್ನ ಉಭಯ ಸದನಗಳು, ಗಡಿ ಬಿಕ್ಕಟ್ಟನ್ನು ಶಾಂತಿಯುತವಾಗಿ ಶಮನಗೊಳಿಸಬೇಕು ಎಂಬ ನಿರ್ದೇಶನವನ್ನು ಚೀನಾಕ್ಕೆ ಸ್ಪಷ್ಟವಾಗಿ ನೀಡಿವೆ’ ಎಂದು ಮಸೂದೆ ಮಂಡಿಸಿದ್ದ ಕಾಂಗ್ರೆಸ್ ಸದಸ್ಯ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.
‘ಭಾರತದ ಗಡಿಯಲ್ಲಿ ಚೀನಾ ಸೇನೆಯಯಾವುದೇ ಪ್ರಚೋದನಾತ್ಮಕ ನಡೆಯನ್ನು ಸಹಿಸಿಕೊಳ್ಳಲಾಗದು. ಭಾರತ– ಫೆಸಿಫಿಕ್ ವಲಯದಲ್ಲಿ ಶಾಂತಿ ಸ್ಥಾಪಿಸಲು ಮತ್ತು ರಕ್ಷಣೆ ನೀಡಲು ಈ ಮಸೂದೆ ಸಹಕರಿಸುತ್ತದೆ’ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ಸೇನಾ ಪಡೆಗಳು ಪೂರ್ವ ಲಡಾಖ್ನಲ್ಲಿ ಮೇ 5ರಿಂದ ಮುಖಾಮುಖಿಯಾಗಿದ್ದವು. ಅಲ್ಲದೆ, ಸಂಘರ್ಷದಲ್ಲಿ ಭಾರತ 20 ಸೈನಿಕರನ್ನು ಕಳೆದುಕೊಂಡಿತ್ತು. ಉದ್ವಿಗ್ನತೆಯ ಶಮನಕ್ಕೆ ಮತ್ತು ಚೀನಾವನ್ನು ಎಚ್ಚರಿಸಲು ರಾಜಾ ಕೃಷ್ಣಮೂರ್ತಿ ಸೇರಿದಂತೆ ಎಂಟು ಮಂದಿ ಕಾಂಗ್ರೆಸ್ ಸದಸ್ಯರು ಕೆಳಮನೆಯಲ್ಲಿ ಮಸೂದೆ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.