ADVERTISEMENT

ಉಪಗ್ರಹ ತ್ಯಾಜ್ಯದ ಪ್ರಶ್ನೆ ಎತ್ತಿದ ಅಮೆರಿಕ: ತೊಂದರೆ ಇಲ್ಲ –ಭಾರತ ಸ್ಪಷ್ಟನೆ

ರಾಯಿಟರ್ಸ್
Published 28 ಮಾರ್ಚ್ 2019, 9:01 IST
Last Updated 28 ಮಾರ್ಚ್ 2019, 9:01 IST
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನ್‌ಹನ್ (ಎಡಚಿತ್ರ), ಭಾರತದ ಎಸ್ಯಾಟ್ ಕ್ಷಿಪಣಿ (ಬಲಚಿತ್ರ).
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನ್‌ಹನ್ (ಎಡಚಿತ್ರ), ಭಾರತದ ಎಸ್ಯಾಟ್ ಕ್ಷಿಪಣಿ (ಬಲಚಿತ್ರ).   

ಮಿಯಾಮಿ (ಅಮೆರಿಕ): ‘ಎಸ್ಯಾಟ್’ ಕ್ಷಿಪಣಿಯ ಪರೀಕ್ಷಾರ್ಥಪ್ರಯೋಗವು ಭೂಮಿಯ ಕೆಳ ಕಕ್ಷೆಯಲ್ಲಿ ನಡೆದ ಕಾರಣ ಬಾಹ್ಯಾಕಾಶದಲ್ಲಿ ತ್ಯಾಜ್ಯದ ಸಮಸ್ಯೆ ಉಂಟಾಗದು. ಎಸ್ಯಾಟ್ ಹೊಡೆದುರುಳಿಸಿದ ಉಪಗ್ರಹದ ತುಣುಕುಗಳುಕೆಲವೇ ವಾರಗಳಲ್ಲಿ ಭೂಮಿಗೆ (ಉರಿದು ಬೂದಿಯಾಗಿ) ಬೀಳಲಿವೆ ಎಂದು ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಹೇಳಿದೆ.

‘ಯಾವುದೇ ದೇಶದ, ಯಾವುದೇ ಪ್ರಯೋಗವೂಬಾಹ್ಯಾಕಾಶವನ್ನು ಅಸ್ಥಿರಗೊಳಿಸಬಾರದು. ಇಂಥ ಬೆಳವಣಿಗೆಗಳನ್ನು ಸಹಿಸಲು ಆಗುವುದಿಲ್ಲ. ಉಪಗ್ರಹಗಳನ್ನು ಹೊಡೆದುರುಳಿಸುವ ಎಸ್ಯಾಟ್‌ ಪ್ರಯೋಗಗಳಿಂದ ಬಾಹ್ಯಾಕಾಶದಲ್ಲಿ ತ್ಯಾಜ್ಯದ ಅನಿಯಂತ್ರಿತ ತುಣುಕುಗಳ ಸಮಸ್ಯೆ ಉಂಟಾಗುವ ಅಪಾಯವಿದೆ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನ್‌ಹನ್ಆಕ್ಷೇಪದ ದನಿ ಎತ್ತಿದ ಹಿನ್ನೆಲೆಯಲ್ಲಿ ಭಾರತ ವಿದೇಶಾಂಗ ಇಲಾಖೆಯ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ.

ಭಾರತವು ಬುಧವಾರ ಎಸ್ಯಾಟ್ ಪರೀಕ್ಷಾರ್ಥ ಪ್ರಯೋಗ ನಡೆಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ಯಾಟ್ರಿಕ್ ಶಾನ್‌ಹನ್, ‘ಭಾರತದಂತೆ ಮುಂದಿನ ದಿನಗಳಲ್ಲಿ ಉಪಗ್ರಹ ನಿರೋಧಕ ಕ್ಷಿಪಣಿಗಳನ್ನು ಪರೀಕ್ಷಿಸಲು ಇಚ್ಛಿಸುವಯಾವುದೇ ದೇಶವು ಬಾಹ್ಯಾಕಾಶದಲ್ಲಿ ಅನಾಹುತ ಉಂಟಾಗದಂತೆ ಎಚ್ಚರಿಕೆಯಿಂದ ವರ್ತಿಸಬೇಕು. ಇಂಥ ಪ್ರಯೋಗಗಳ ನಂತರ ಬಾಹ್ಯಾಕಾಶದಲ್ಲಿ ಉಪಗ್ರಹ ತ್ಯಾಜ್ಯಗಳುಅಪಾಯ ಉಂಟುಮಾಡಬಹುದು’ ಎಂದು ಹೇಳಿದ್ದರು.

ADVERTISEMENT

‘ಭಾರತದ ಎಸ್ಯಾಟ್ ಪ್ರಯೋಗದಿಂದ ಬಾಹ್ಯಾಕಾಶದಲ್ಲಿ ಉಪಗ್ರಹ ತ್ಯಾಜ್ಯದ ಸಮಸ್ಯೆ ಉಂಟಾಗಲಿದೆಯೇ?’ ಎನ್ನುವ ಪ್ರಶ್ನೆಗೆ ಶಾನ್‌ಹನ್ನೇರ ಉತ್ತರ ನೀಡಲಿಲ್ಲ. ‘ಭಾರತದ ನಡೆಸಿದ ಪ್ರಯೋಗದ ಪರಿಣಾಮಗಳನ್ನು ಅಮೆರಿಕ ಗಮನಿಸುತ್ತಿದೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

‘ನಾವೆಲ್ಲರೂ ಬದುಕುವ, ನಮ್ಮೆಲ್ಲರ ಬದುಕಿಗೆ ಅತ್ಯಗತ್ಯವಾಗಿ ಬೇಕಿರುವಬಾಹ್ಯಾಕಾಶವನ್ನು ತಿಪ್ಪೆಗುಂಡಿ ಮಾಡುವುದು ಬೇಡ. ಬಾಹ್ಯಾಕಾಶ ಎನ್ನುವುದು ವ್ಯಾಪಾರದ ಸ್ಥಳ, ಬಾಹ್ಯಕಾಶದಲ್ಲಿ ಯಾರು ಬೇಕಾದರೂ ಮುಕ್ತವಾಗಿ ವ್ಯವಹಾರ ನಡೆಸಲು ಅವಕಾಶ ಇರಬೇಕು’ ಎಂದು ಹೇಳಿದ್ದರು.

‘ಬಾಹ್ಯಾಕಾಶದ ಮೇಲಿನ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ಬಾಹ್ಯಾಕಾಶದಲ್ಲಿ ವಿವಿಧ ದೇಶಗಳು ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದಕ್ಕೆ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳಿಲ್ಲ. ನಿಯಮಗಳ ಇಲ್ಲದಿರುವ ಸನ್ನಿವೇಶದಲ್ಲಿ ವಿಜ್ಞಾನಿಗಳು ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿಪಡಿಸುತ್ತಾರೆ ಮತ್ತು ಪರೀಕ್ಷಿಸುತ್ತಾರೆ. ಅಂತರರಾಷ್ಟ್ರೀಯ ಸಮುದಾಯ ಶೀಘ್ರ ಇತ್ತ ಗಮನಕೊಡಬೇಕಿದೆ. ಯಾವ ದೇಶ ನಡೆಸುವ ಪರೀಕ್ಷೆಯೂ ಇನ್ನೊಂದು ದೇಶದ ಹಿತಾಸಕ್ತಿಯನ್ನು ಅಪಾಯಕ್ಕೆ ದೂಡಬಾರದು’ ಎಂದು ಶಾನ್‌ಹನ್ ಅಭಿಪ್ರಾಯಪಟ್ಟರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.