ವಾಷಿಂಗ್ಟನ್: ‘ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಕ್ಕೆ ಅಮೆರಿಕ ಹೆಚ್ಚು ಮಹತ್ವ ನೀಡುತ್ತದೆ. ಆದರೆ, ತಮ್ಮ ದೇಶದ ಆರ್ಥಿಕ ನೀತಿಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಭಾರತದ ಮುಖಂಡರು ಅಷ್ಟೇ ಸ್ವತಂತ್ರರು’ ಎಂದು ಶ್ವೇತಭವನ ಹೇಳಿದೆ.
ಉಕ್ರೇನ್–ರಷ್ಯಾ ನಡುವೆ ಯುದ್ಧ ಆರಂಭಗೊಂಡ ನಂತರ ರಷ್ಯಾದೊಂದಿಗಿನ ಭಾರತದ ವ್ಯಾಪಾರ ಹೆಚ್ಚಿದೆ. ಅದರಲ್ಲೂ, ರಿಯಾಯಿತಿ ದರದಲ್ಲಿ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಶ್ವೇತಭವನದ ಭದ್ರತಾ ಮಂಡಳಿಯ ಸಮನ್ವಯಕಾರ ಜಾನ್ ಕಿರ್ಬಿ ಈ ಪ್ರತಿಕ್ರಿಯೆ ನೀಡಿದ್ದಾರೆ.
‘ಭಾರತದೊಂದಿಗಿನ ನಮ್ಮ ಬಾಂಧವ್ಯಕ್ಕೆ ಮಹತ್ವ ನೀಡುತ್ತೇವೆ. ಹಿಂದೂಮಹಾಸಾಗರ–ಪೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿ ಭಾರತ ಮುಖ್ಯ ಪಾಲುದಾರ ರಾಷ್ಟ್ರ’ ಎಂದು ಹೇಳಿದರು.
‘ತನ್ನ ಹಿತಾಸಕ್ತಿಗೆ ಅನುಗುಣವಾಗಿ ಪ್ರತಿ ದೇಶವೂ ನಿರ್ಧಾರ ಕೈಗೊಳ್ಳಬೇಕು ಎಂಬುದಾಗಿ ಅಮೆರಿಕ ಬಯಸುತ್ತದೆ. ಕೆಲವು ನಿರ್ಧಾರಗಳು ಆಯಾ ದೇಶದ ಸಾರ್ವಭೌಮತೆಗೆ ಸಂಬಂಧಿಸಿದ್ದಾಗಿರುತ್ತವೆ. ಆದರೆ, ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ಎಷ್ಟು ಸಾಧ್ಯವೋ ಅಷ್ಟು ಜಾಗತಿಕವಾಗಿ ಒತ್ತಡ ಹೇರಬೇಕು ಎಂಬುದು ಅಮೆರಿಕದ ನಿಲುವು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.