ಪ್ರಾತಿನಿಧಿಕ ಚಿತ್ರ
ಲಂಡನ್: ಕದನ ವಿರಾಮ ಖಾತ್ರಿಪಡಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನದ ಜತೆಗೆ ಕೆಲಸ ಮಾಡಲು ಬ್ರಿಟನ್ ಸಿದ್ಧವಾಗಿದೆ. ಅಲ್ಲದೆ, ‘ಭಯಾನಕವಾದ ಭಯೋತ್ಪಾದನೆ’ಯನ್ನು ಹತ್ತಿಕ್ಕಲು ಎರಡೂ ಕಡೆಯವರ ಪ್ರಯತ್ನಗಳನ್ನು ಬೆಂಬಲಿಸಲು ಒಲವು ತೋರಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಬ್ರಿಟನ್ ಸಂಸತ್ತಿಗೆ ತಿಳಿಸಿದ್ದಾರೆ.
ಮಂಗಳವಾರ ಹೌಸ್ ಆಫ್ ಕಾಮನ್ಸ್ನಲ್ಲಿ ನಡೆದ ಕಾಶ್ಮೀರ ವಿಷಯ ಕುರಿತ ಚರ್ಚೆ ವೇಳೆ, ಸಿಂಧೂ ಜಲ ಒಪ್ಪಂದದ ಬಗ್ಗೆ ತಮ್ಮ ಬದ್ಧತೆಯನ್ನು ಕಾಯ್ದುಕೊಳ್ಳುವಂತೆ ಉಭಯ ರಾಷ್ಟ್ರಗಳನ್ನು ಪ್ರೋತ್ಸಾಹಿಸಲು ನವದೆಹಲಿ ಮತ್ತು ಇಸ್ಲಾಮಾಬಾದ್ನಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಲ್ಯಾಮಿ ಹೇಳಿದರು.
ಉಭಯ ದೇಶಗಳ ನಡುವಿನ ಕದನ ವಿರಾಮದ ಬದ್ಧತೆಯನ್ನು ಬ್ರಿಟನ್ ಸ್ವಾಗತಿಸುತ್ತದೆ. ಎರಡೂ ದೇಶಗಳೊಂದಿಗಿನ ನಮ್ಮ ಗಟ್ಟಿಯಾದ ಮತ್ತು ನಿಕಟ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು, ಶಾಶ್ವತ ಕದನ ವಿರಾಮವನ್ನು ಸಾಕಾರಗೊಳಿಸಲು ಎರಡೂ ಕಡೆಯವರೊಂದಿಗೆ ಕೆಲಸ ಮಾಡಲು ಬ್ರಿಟನ್ ಸಿದ್ಧವಾಗಿದೆ ಎಂದು ಲ್ಯಾಮಿ ಸಂಸದರಿಗೆ ತಿಳಿಸಿದರು.
‘ಪಹಲ್ಗಾಮ್ನಲ್ಲಿ 26 ಮಂದಿಯನ್ನು ಗುಂಡಿಕ್ಕಿ ಕೊಂದಿದ್ದು ಭಯಾನಕ ಕೃತ್ಯ. ಇದನ್ನು ನಾವು ಖಂಡಿಸುತ್ತೇವೆ. ಭಯೋತ್ಪಾದಕರ ಬೆದರಿಕೆಯನ್ನು ಎದುರಿಸಲು ನಾವು ನಿಕಟ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.