ADVERTISEMENT

ಶ್ರೀಲಂಕಾಕ್ಕೆ ತುರ್ತು ನೆರವು ನೀಡಲು ಸಿದ್ಧ: ವಿಶ್ವಬ್ಯಾಂಕ್

ವೈದ್ಯಕೀಯ, ಪೌಷ್ಟಿಕಾಂಶ ಪದಾರ್ಥಗಳ ಪೂರೈಕೆ ನೆರವು

ಪಿಟಿಐ
Published 20 ಏಪ್ರಿಲ್ 2022, 11:27 IST
Last Updated 20 ಏಪ್ರಿಲ್ 2022, 11:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಲಂಬೊ: ವಿದೇಶಿ ವಿನಿಮಯದ ಕೊರತೆಯಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ಶ್ರೀಲಂಕಾಕ್ಕೆ ಅಗತ್ಯವಿರುವ ತುರ್ತು ನೆರವು ನೀಡಲು ಸಿದ್ಧವಿರುವುದಾಗಿ ವಿಶ್ವ ಬ್ಯಾಂಕ್ ಹೇಳಿದೆ. ಅಲ್ಲದೆ ಸಂಕಷ್ಟಕ್ಕೆ ತುತ್ತಾದ ಜನರನ್ನು ರಕ್ಷಿಸುವುದಾಗಿ ಅದು ಇದೇ ವೇಳೆ ತಿಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್‌ನ ವಾರ್ಷಿಕ ಸಭೆಗಾಗಿಶ್ರೀಲಂಕಾದ ಹಣಕಾಸು ಸಚಿವ ಅಲಿ ಸಾಬ್ರಿ ಅವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ವೇಳೆ ಸಾಬ್ರಿ ಹಾಗೂವಿಶ್ವ ಬ್ಯಾಂಕ್‌ನ ಉಪಾಧ್ಯಕ್ಷ ಹಾರ್ಟ್‌ವಿಗ್ ಶಾಫರ್ ಅವರು ಮಂಗಳವಾರ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ಬುಧವಾರ ಕೊಲಂಬೊ ಗೆಜೆಟ್ ಪತ್ರಿಕೆ ವರದಿ ಮಾಡಿದೆ.

ಆರ್ಥಿಕ ಬಿಕ್ಕಟ್ಟು ನಿವಾರಣೆ, ಸ್ಥಿರತೆ ಮತ್ತು ಸುಧಾರಣೆಗಾಗಿ ಸಹಕಾರ ಮತ್ತು ಸಂಕಷ್ಟಕ್ಕೆ ಸಿಲುಕಿದ ಜನರ ರಕ್ಷಣೆ ಬಗ್ಗೆ ಮಾತುಕತೆ ನಡೆಸಲಾಗಿದೆ. ಈ ಬಿಕ್ಕಟ್ಟಿನಿಂದ ಬಡವರು ಮತ್ತು ಅತಿ ಬಡವರ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿಶ್ವಬ್ಯಾಂಕ್ ಕಳವಳಕ್ಕೀಡಾಗಿದೆ. ಹೀಗಾಗಿ ಶ್ರೀಲಂಕಾಕ್ಕೆ ವೈದ್ಯಕೀಯ, ಆರೋಗ್ಯ ಸಂಬಂಧಿತ ಸಲಕರಣೆಗಳು, ಪೌಷ್ಟಿಕಾಂಶ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ತುರ್ತು ನೆರವು ನೀಡಲು ಸಿದ್ಧ ಇರುವುದಾಗಿ ಎದು ಶಾಫರ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.