
ಮಾಘ ಮೇಳ
(ಪಿಟಿಐ ಚಿತ್ರ)
ಪ್ರಯಾಗರಾಜ್: ಮಾಘಮೇಳದಲ್ಲಿ ವಸಂತ ಪಂಚಮಿ ದಿನದ ಅಂಗವಾಗಿ ಇಂದು (ಶುಕ್ರವಾರ) ತ್ರಿವೇಣಿ ಸಂಗಮದಲ್ಲಿ ಒಂದು ಕೋಟಿಗೂ ಅಧಿಕ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮಧ್ಯರಾತ್ರಿಯಿಂದಲೇ ಭಕ್ತರ ದಂಡು ಗಂಗಾ ಮತ್ತು ಸಂಗಮ ಘಾಟ್ ಕಡೆಗೆ ಹರಿದುಬಂದಿತ್ತು. ಇಂದು ಬೆಳಿಗ್ಗೆ 8 ಗಂಟೆ ವೇಳೆಗೆ ಗಂಗಾ ಹಾಗೂ ಸಂಗಮದಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
'ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿ ಸೇರುವ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ವಸಂತ ಪಂಚಮಿ ಆಚರಣೆಗೆ ವಿಶೇಷ ಮಹತ್ವವಿದೆ' ಎಂದು ತೀರ್ಥ ಪುರೋಹಿತ ರಾಜೇಂದ್ರ ಮಿಶ್ರಾ ತಿಳಿಸಿದ್ದಾರೆ.
ಈ ವಿಶೇಷ ದಿನದಂದು ಸರಸ್ವತಿ ದೇವಿಯ ಆರಾಧನೆ, ಪೂಜೆ ಹಾಗೂ ಹಳದಿ ಬಟ್ಟೆಗಳನ್ನು ಧರಿಸಲಾಗುತ್ತದೆ. ವಸಂತಕಾಲದ ಆರಂಭಕ್ಕೆ ಸಂಬಂಧಿಸಿದ ಆಚರಣೆಯು ಇದಾಗಿದೆ.
ಏಳು ವಲಯಗಳ 800 ಹೆಕ್ಟೇರ್ ಪ್ರದೇಶದಲ್ಲಿ ಮಾಘ ಮೇಳವನ್ನು ಆಯೋಜಿಸಲಾಗಿದೆ. 25 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. 3,500ಕ್ಕೂ ಅಧಿಕ ನೈರ್ಮಲ್ಯ ಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಧ್ಯಾನ ಹಾಗೂ ಯೋಗ ಮಾಡುವುದಾಗಿ ಸೌಲಭ್ಯಗಳನ್ನು ಏರ್ಪಡಿಸಲಾಗಿದೆ. ಯಾತ್ರಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.
ಭಕ್ತರ ಸುರಕ್ಷತೆಗಾಗಿ 10 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಮಾಘ ಮೇಳ) ನೀರಜ್ ಪಾಂಡೆ ತಿಳಿಸಿದ್ದಾರೆ.
ಮಾಘ ಮೇಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.