ADVERTISEMENT

ತತ್ವದ ಆಚರಣೆ ಮುಖ್ಯ

ಡಾ.ಎಂ.ಎ ಜಯಚಂದ್ರ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST

ಮಹಾವೀರ ಜಯಂತಿ ಆಚರಿಸುವ ಭಕ್ತರಲ್ಲಿ ಎರಡು ಗುಂಪನ್ನು ಗುರುತಿಸಬಹುದು. ಒಂದು ಗುಂಪು ಜಯಂತಿಯ ಆಚರಣೆಯನ್ನು ವೈಭವದಿಂದ ಆಚರಿಸಲು ಬಯಸುತ್ತದೆ. ಅವರಿಗೆ ವಿವಿಧ ವಾದ್ಯಗಳಿರುವ ಭವ್ಯ ಮೆರವಣಿಗೆ ಬೇಕು. ಅಮೋಘ ಸಭೆ ಬೇಕು. ಮಂತ್ರಿ ಮಹೋದಯರು ಆಗಮಿಸಬೇಕು. ಜನ ಸೇರಿ ಜಾತ್ರೆ ಆಗಬೇಕು.

ಮತ್ತೊಂದು ಗುಂಪಿನವರು ಇವೆಲ್ಲಕ್ಕೂ ಅಸಮ್ಮತಿ ಸೂಚಿಸದಿದ್ದರೂ, ಮಹಾವೀರರ ತತ್ವಗಳ ಕಡೆ ಒತ್ತು ಕೊಡುತ್ತಾರೆ. ಆ ಬಗ್ಗೆ ಚಿಂತನೆ, ಸಂವಾದ ನಡೆಯಬೇಕೆಂದು ಬಯಸುತ್ತಾರೆ. ಭಕ್ತರ ಈ ಎರಡು ಗುಂಪುಗಳಲ್ಲಿ ಯಾವ ಗುಂಪು ಮಹಾವೀರರಿಗೆ ಪ್ರಿಯವಾದುದು? ಎರಡು ಗುಂಪೂ ಪ್ರಿಯವಾದುದೇ. ಮೊದಲ ಗುಂಪು ಪರಂಪರೆಯನ್ನು ಜೀವಂತಿಕೆಯಲ್ಲಿ ಇರಿಸಿಕೊಳ್ಳಲು ಆಶಿಸುತ್ತದೆ. ಆದರೆ ಎರಡನೆಯ ಗುಂಪು ಮೂಲದ್ರವ್ಯವಾದ ತತ್ವವನ್ನು ಜೀವನದಲ್ಲಿ, ವ್ಯವಹಾರದಲ್ಲಿ, ಆಡಳಿತದಲ್ಲಿ ಆಚರಣೆಗೆ ತರಲು ಬಯಸುತ್ತದೆ.

ಮಹಾವೀರರು 12 ವರ್ಷಗಳ ದೀರ್ಘ ತಪಸ್ಸಿನ ನಂತರ ಕೇವಲ ಜ್ಞಾನಿಯಾದರು, ತೀರ್ಥಂಕರರಾದರು. ಅವರ ಧರ್ಮಸಭೆ, ಬಿಹಾರದ ರಾಜಗೃಹವೆಂಬ ನಗರವನ್ನು ಸುತ್ತುವರಿದಿರುವ ಐದು ಪರ್ವತಗಳಲ್ಲಿ ಒಂದಾದ ವಿಪುಲಾಚಲಕ್ಕೆ ಆಗಮಿಸಿತು. ಅಲ್ಲಿಗೆ ಗೌತಮನೆಂಬ ಯೋಗ್ಯ ಶಿಷ್ಯ ಆಗಮಿಸಿದಾಗ, ಅವರ ಮೊದಲ
ಧರ್ಮೋಪದೇಶ ಪ್ರಾರಂಭವಾಯಿತು- ಧಮ್ಮೋ ಮಂಗಲಮುಕ್ಕಿಟ್ಠಂ, ಅಹಿಂಸಾ ಸಂಜಮೋ ತವೋ|| ಧರ್ಮವು ಉತ್ಕೃಷ್ಟ ಮಂಗಲ. ಅದು ಪಾಪವನ್ನು ಹೋಗಲಾಡಿಸಿ,
ಪುಣ್ಯವನ್ನು ತಂದುಕೊಡುವುದು. ಈ ಧರ್ಮವು ಅಹಿಂಸೆ, ಸಂಯಮ, ತಪದಿಂದ ಕೂಡಿದೆ. ಇಂಥ ಧರ್ಮದಲ್ಲಿ ಯಾರ ಮನಸ್ಸು ಇರುವುದೋ, ಅಂಥವರನ್ನು ದೇವತೆಗಳೂ ನಮಸ್ಕರಿಸುತ್ತಾರೆ.

ADVERTISEMENT

ಮಹಾವೀರರ ಉಪದೇಶದಿಂದ ಏನಾದರು ಪಾಠ ಕಲಿಯುವುದು ಇದ್ದರೆ, ಮೊದಲು ಅಹಿಂಸೆಯ ಪಾಠ ಕಲಿಯಬೇಕು. ಅಹಿಂಸೆಯ ಅರ್ಥ ಜೀವಗಳನ್ನು ಕೊಲ್ಲುವುದು, ಕೊಲ್ಲದಿರುವುದಕ್ಕೆ ಸೀಮಿತವಾದುದಲ್ಲ. ಅವರ ಅಹಿಂಸಾ ದರ್ಶನ ವ್ಯಾಪಕವಾದುದು.

ಹೇಗೆ ನನ್ನ ಪ್ರಾಣವಿದೆಯೋ ಅದೇ ರೀತಿ ಜಗತ್ತಿನ ಅನ್ಯ ಪ್ರಾಣಿಗಳಲ್ಲೂ ಪ್ರಾಣವಿದೆ. ಹೇಗೆ ನಾನು ಜೀವಿಸಲು ಬಯಸುತ್ತೇನೋ ಅದೇ ರೀತಿ ಅನ್ಯ ಪ್ರಾಣಿಗಳೂ ಜೀವಿಸಲು ಬಯಸುತ್ತವೆ. ಹೇಗೆ ನಾನು ಸಾಯಲು ಇಚ್ಛಿಸುವುದಿಲ್ಲವೋ ಅದೇ ರೀತಿ ಅನ್ಯ ಪ್ರಾಣಿಗಳು ಸಾಯಲು ಇಷ್ಟಪಡುವುದಿಲ್ಲ. ಹೇಗೆ ನನಗೆ ಸುಖ ಪ್ರಿಯವಾಗಿದೆಯೋ ಅದೇ ರೀತಿ ಬೇರೆ ಪ್ರಾಣಿಗಳಿಗೂ ಸುಖ ಪ್ರಿಯವಾಗಿದೆ. ಹೇಗೆ ನನಗೆ ದುಃಖ ಅಪ್ರಿಯ ಆಗಿದೆಯೋ, ಅದೇ ರೀತಿ ಜಗತ್ತಿನ ಅನ್ಯ ಪ್ರಾಣಿಗಳಿಗೂ ದುಃಖ ಅಪ್ರಿಯವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಯಾರಿಗಾದರು ಜೀವ ನೀಡಲು ಸಾಧ್ಯವಿಲ್ಲದಿರುವಾಗ, ಜಗತ್ತಿನಲ್ಲಿ ಇನ್ನೊಬ್ಬರ ಜೀವ ತೆಗೆಯುವ ಹಕ್ಕು ನಮಗೆಲ್ಲಿದೆ? ಆದ್ದರಿಂದ ಎಲ್ಲರನ್ನು ತನ್ನಂತೆ ಸಮಾನವಾಗಿ ಕಾಣು ಎಂಬ ಮಹಾವೀರರ ಅಹಿಂಸಾ ಭಾವನೆ ಸ್ವಲ್ಪ ಭಿನ್ನರೂಪದಲ್ಲಿ ಅನ್ಯ ಗ್ರಂಥಗಳಲ್ಲಿ ದೊರೆಯುವುದು. ಇದಕ್ಕೆ ಮಹಾವೀರರ ಪ್ರಭಾವವೇ ಕಾರಣವೆಂದು ವಿದ್ವಾಂಸರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.