ಶಿರಸಿ: ‘ಸಂಸ್ಕೃತ ನಾಟಕಕಾರ ರಾಜಶೇಖರ ಸುಮಾರು 1,100 ವರ್ಷಗಳ ಹಿಂದೆ ಬರೆದ ‘ಬಾಲ ರಾಮಾಯಣ’ ಕೃತಿಯನ್ನು ಈಗ ಬರೆದಿದ್ದರೆ, ಆತ ಬಲಪಂಥೀಯರು ಮತ್ತು ಎಡಪಂಥೀಯರು ಇಬ್ಬರ ಕೈಯಲ್ಲೂ ಹೊಡೆತ ತಿನ್ನುತ್ತಿದ್ದ!’
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷಪ್ರೊ. ಎಂ.ಎ. ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ ‘ಬಾಲ ರಾಮಾಯಣ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿದ ಹೆಗ್ಗೋಡಿನ ‘ನೀನಾಸಂ’ ಮುಖ್ಯಸ್ಥ ಕೆ.ವಿ. ಅಕ್ಷರ ಅವರು ಈ ಮೇಲಿನ ಸಾಲಿನೊಂದಿಗೆ ಮಾತಿಗಾರಂಭಿಸಿದರು.
‘ರಾಜಶೇಖರ ಆಗ ಆ ಕೃತಿಯನ್ನು ರಚಿಸದೇ, ಒಬ್ಬ ಮಲೆನಾಡಿಗನಾಗಿ ಈಗ ಕನ್ನಡದಲ್ಲಿ ಈ ಕೃತಿ ಬರೆದಿದ್ದರೆ, ಆತ ನ್ಯಾಯಾಲಯ ಪ್ರಕರಣ ಎದುರಿಸಬೇಕಾಗುತ್ತಿತ್ತು.ಕರ್ನಾಟಕದಲ್ಲಿ ಮುಕ್ತವಾಗಿ ಓಡಾಡಲು ಕಷ್ಟಪಡಬೇಕಾಗುತ್ತಿತ್ತು. ಆತನ ಪುಸ್ತಕವೂ ನಿಷೇಧಗೊಳ್ಳುತ್ತಿತ್ತು. ಯಾಕೆಂದರೆ ಮೂಲ ರಾಮಾಯಣದ ಹಾದಿ ತಪ್ಪಿಸದೇಯೇ ಆತ ಆ ಕೃತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾನೆ.
‘ನಮ್ಮ ಪವಿತ್ರ ಗ್ರಂಥ ರಾಮಾಯಣವನ್ನು ತುಂಡುತುಂಡು ಮಾಡಿ, ಅದಕ್ಕಿರುವ ಮರ್ಯಾದೆ ಕಳೆದ’ ಎಂದು ಒಂದು ಪಂಥದವರು ಹೇಳಿದರೆ, ಇನ್ನೊಂದು ಪಂಥದವರು, ‘ಶತಮಾನಗಳ ಹಿಂದಿನ ಮೌಲ್ಯಗಳ ಪುನರುತ್ಥಾನ ಮಾಡುವ ಮೂಲಕ, ಅಂತರ್ಜಾತಿ ವಿವಾಹ ಮಾಡಿಕೊಂಡರೂ, ಬ್ರಾಹ್ಮಣತ್ವ ಬಿಟ್ಟಿಲ್ಲ. ಹೀಗಾಗಿ ಆತ ಪ್ರಗತಿಯ ವಿರೋಧಿ ಎಂದು ಬೈಯುತ್ತಿದ್ದರು’ ಎಂದು ಲಘು ಹಾಸ್ಯದಲ್ಲಿ ಅಕ್ಷರ ಅವರು ಹೇಳಿದಾಗ, ಸಭೆಯಲ್ಲಿದ್ದ, ಎಡ–ಬಲ ಎರಡೂ ಪಂಥಗಳವರು ಜೋರಾಗಿ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.