
ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ್ ಬರೆದಿರುವ ‘ಛಾವಾ’ ಕೃತಿಯನ್ನು ಆಧರಿಸಿ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಕುರಿತ ಚಿತ್ರ ಇದಾಗಿದೆ.
16 ವರ್ಷದಲ್ಲಿರುವಾಗಲೇ ಸಕಲ ಯುದ್ಧ ಕಲೆಗಳನ್ನು ಮೈಗೂಡಿಸಿಕೊಂಡಿದ್ದ ಯುವಕನೊಬ್ಬ ತೋರ್ನಾ ಕೋಟೆಯನ್ನು ವಶಪಡಿಸಿಕೊಂಡಿದ್ದನು. ಮೊಘಲ್ ಪಡೆಗಳಿಗೆ ಸಿಂಹ ಸ್ವಪ್ನವಾಗಿದ್ದ ಶಿವಾಜಿ ಆಧುನಿಕ ಯುದ್ಧ ನೀತಿಯಿಂದ ಬಹು ಬೇಗನೆ ತನ್ನ ಸಾಮ್ರಾಜ್ಯವನ್ನು ಕಟ್ಟಿದನು. ಇಂದು ಧರ್ಮ ರಕ್ಷಕನಾಗಿಯೂ ಕೆಲಸ ಮಾಡಿದ ಛತ್ರಪತಿ ಶಿವಾಜಿ ಮಹಾರಾಜ ಅವರ ಜಯಂತಿ. ಇವರ ಜಯಂತಿಯನ್ನು ಪ್ರತಿ ವರ್ಷ ಫೆಬ್ರುವರಿ 19ರಂದು ಆಚರಿಸಲಾಗುತ್ತದೆ.
ಶಿವಾಜಿ ದಿಟ್ಟ ಯೋಧ ಹಾಗೂ ಚತುರ ಆಡಳಿತಗಾರನಾಗಿದ್ದನು. ಸ್ಥಳೀಯ ಆಡಳಿತಕ್ಕೆ ಹೆಚ್ಚು ಒತ್ತು ನೀಡಿದ ಶಿವಾಜಿ ಧಾರ್ಮಿಕ ಸಹಿಷ್ಣುತೆಯನ್ನು ತನ್ನ ಆಡಳಿತದಲ್ಲಿ ಜಾರಿ ಮಾಡಿದ್ದರು. ಹೊಸ ಯುದ್ಧ ನೀತಿಯನ್ನು ಜಾರಿ ಮಾಡಿದ ಶಿವಾಜಿ ಗೆರಿಲ್ಲಾ ಯುದ್ಧ ತಂತ್ರಕ್ಕೆ ಹೆಸರುವಾಸಿಯಾಗಿದ್ದರು. ಸಹ್ಯಾದ್ರಿ ಪರ್ವತಗಳ ಕಾರ್ಯತಂತ್ರಗಳನ್ನು ಬಳಕೆ ಮಾಡಿಕೊಂಡು, ಭೌಗೋಳಿಕತೆಗೆ ಅನುಗುಣವಾಗಿ ಯುದ್ಧ ನೀತಿಯನ್ನು ಅನುಸರಿಸಿ ಅದರಲ್ಲಿ ಯಶಸ್ಸನ್ನೂ ಕಂಡರು.
ಶಿವಾಜಿ ರಾಯಗಡ ಮತ್ತು ಸಿಂಹಗಡ ಸೇರಿದಂತೆ ಹಲವು ಕಡೆ 300 ಹೆಚ್ಚು ಕೋಟೆಗಳನ್ನು ನಿರ್ಮಿಸಿದ್ದಾರೆ. ತನ್ನ ಸೈನ್ಯದಲ್ಲಿ ಗುಪ್ತಚರ ಜಾಲವನ್ನು ಸ್ಥಾಪಿಸಿದರು. ಶಿವಾಜಿಯ ಆಡಳಿತ ಜನ ಕೇಂದ್ರಿತವಾಗಿತ್ತು. ಅಲ್ಲಿ ನ್ಯಾಯಾಂಗದ ವ್ಯವಸ್ಥೆಯೂ ಇತ್ತು. ಭಾರತದ ಮೊದಲ ನೌಕಾಪಡೆಯನ್ನು ಸ್ಥಾಪಿಸಿದ ಶಿವಾಜಿ ಸೈನಿಕರನ್ನು ಅರ್ಹತೆಯ ಮೇರೆಗೆ ಆಯ್ಕೆ ಮಾಡುತ್ತಿದ್ದರು. ಇವರು 400ಕ್ಕೂ ಹೆಚ್ಚು ನೌಕೆಗಳನ್ನು ಸಿದ್ದಪಡಿಸಿದ್ದರು ಎಂದು ಹೇಳಲಾಗುತ್ತದೆ. ಶಿವಾಜಿಯ ಸಾಮ್ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇತ್ತು. ಅಲ್ಲದೇ ತನ್ನ ರಾಜ್ಯದಲ್ಲಿ ಮರಾಠಿ ಮತ್ತು ಸಂಸ್ಕೃತ ಭಾಷೆಗಳನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದರು ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
1630ರ ಫೆಬ್ರುವರಿ 19ರಂದು ಮಹಾರಾಷ್ಟ್ರದ ಶಿವನೇರಿ ಎಂಬಲ್ಲಿ ಶಿವಾಜಿ ಜನಿಸಿದರು. ಬಿಜಾಪುರ ಸುಲ್ತಾನರ ಅಧೀನದಲ್ಲಿ ಆಳ್ವಿಕೆ ನಡೆಸುತ್ತಿದ್ದ ಇವರ ತಂದೆ ಶಹಾಜಿ ಭೋಂಸ್ಲೆ ಮತ್ತು ಜೀಜಾಬಾಯಿ ಮಗನಾದ ಶಿವಾಜಿ ಸಣ್ಣ ವಯಸ್ಸಿನಿಂದಲೇ ಧೈರ್ಯಶಾಲಿಯಾಗಿದ್ದರು. ಬಾಲ್ಯದಿಂದಲೇ ತಾಯಿ ಜೀಜಾಬಾಯಿ ಶಿವಾಜಿಗೆ ಶೌರ್ಯ, ನ್ಯಾಯ ಮತ್ತು ಧರ್ಮದ ಮೌಲ್ಯಗಳನ್ನು ತುಂಬಿದರು. ರಾಮಾಯಾಣ ಮಹಾಭಾರತದಂತಹ ಪುರಾಣ ಕಥೆಗಳ ಮೂಲಕ ಶಿವಾಜಿಗೆ ಆದರ್ಶ ಕಥೆಗಳನ್ನು ಹೇಳಿದರು. ಶಿವಾಜಿಯವರಿಗೆ ದಾದೋಜಿ ಕೊಂಡ್ ದಿಯೋ ಅವರು ಮಿಲಿಟರಿ ಶಿಕ್ಷಣ ನೀಡಿದರು. ಕುದುರೆ ಸವಾರಿ, ಕತ್ತಿವರಸೆ ಮತ್ತು ಯುದ್ದ ನೀತಿ ಹಾಗೂ ಕಾರ್ಯತಂತ್ರದ ಚಿಂತನಾ ಕೌಶಲ್ಯಗಳನ್ನು ಕಲಿಸಿದರು.
ಪ್ರಸ್ತುತವಾಗಿ ಛತ್ರಪತಿ ಶಿವಾಜಿ ಅವರ ಹೆಸರಿನಲ್ಲಿ ಮಹಾರಾಷ್ಟ್ರದ ಹಲವು ಕಡೆ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಮುಂಬೈನ ರೈಲು ನಿಲ್ದಾಣಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂದು ಹೆಸರಿಡಲಾಗಿದೆ. ಮುಂಬೈ ಕರಾವಳಿಯಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಅಲ್ಲಿನ ಸರ್ಕಾರ ಇತ್ತೀಚೆಗೆ ತಿಳಿಸಿದೆ.
ಛತ್ರಪತಿ ಶಿವಾಜಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಬಾಲಗಂಗಾಧರ ತಿಲಕ್, ಸುಭಾಷ್ ಚಂದ್ರ ಬೋಸ್ ಮತ್ತು ವೀರ್ ಸಾವರ್ಕರ್ ತಮ್ಮ ಕ್ರಾಂತಿಕಾರಿ ಪ್ರಯತ್ನಗಳಿಗೆ ಶಿವಾಜಿ ಮಹಾರಾಜರನ್ನು ಸ್ಫೂರ್ತಿ ಎಂದು ಆಗಾಗ್ಗೆ ಉಲ್ಲೇಖಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.