ADVERTISEMENT

200 ಮಿನಿಟ್ನಾಗೇ ಫ್ರೀಡಂ!

ಡಾ.ಬಿ.ಎಲ್.ವೇಣು
Published 5 ಫೆಬ್ರುವರಿ 2019, 20:00 IST
Last Updated 5 ಫೆಬ್ರುವರಿ 2019, 20:00 IST
.
.   

ಕೇಂದ್ರ ಸಚಿವರೊಬ್ಬರು ತಮ್ಮ ನಾಲಿಗೆಯಲ್ಲಿ ಉರಿ ಮಾತುಗಳನ್ನೇ ಉದುರಿಸಲು ಕಾರಣವೇನೆಂಬುದನ್ನು ಹನುಮಂತಿ ಸಂಶೋಧಿಸಿ ಫ್ರೆಂಡ್ಸ್ ಮುಂದೆ ವಾದ ಮಂಡಿಸಿದ. ಆ ಸಚಿವರ ನಾಲಿಗೆಯು ಆಚಾರ ತಪ್ಪಿಲ್ಲ ಎಂದು ವಕಾಲತ್ತಿಗೆ ನಿಂತ.

‘ಗುಡಿಯಾಗಲ ದೇವರನ್ನೇ ನೋಡಿ, ತರಾವರಿ ವೆಪನ್ಸ್ ಹಿಡಿದು ಉರಿಗಣ್ಣು ಬಿಡ್ತಿಲ್ವೆ. ಕಾಳಿ, ದುರ್ಗಿ, ಮಾರಮ್ಮ, ಚಾಮುಂಡಮ್ಮ ಯಾವಮ್ಮನ್ನೇ ತಕಳ್ಳಿ, ನಾಕಾರು ಕೈನಾಗೆ ಚಾಕು, ಚೂರಿ, ತಲವಾರ್‌, ತ್ರಿಸೂಲ ಏನೇನೋ ಹಿಡ್ಕೊಂಡಿಲ್ವೆ? ಗಂಡಸು ದೇವರೇನು ಕಮ್ಮಿ? ಹಣೆಮ್ಯಾಗೆ ಉರಿಗಣ್ಣು ಇಕ್ಕಂಡಿರ ಈಸ್ವರ ರೇಗಿದ್ರೆ ಎದುರಿಗಿರವ್ರನ್ನ ಸುಟ್ಟು ಭಸಮ ಮಾಡ್ತಾನೆ. ವಿಷ್ಣು ಕೈನಾಗೆ ಚಕ್ರ, ಆಂಜನೇಯ ಗದೆ, ಈರಭದ್ರ ಖಡ್ಗ ಹಿಡಿದ್ರೆ, ನರಸಿಮ್ಮನದೋ ಕಳ್ಳು ಬಗೆಯೋ ಪೋಜು. ಹಿಸ್ಟರಿಗೆ ಬಂದ್ರೆ ಲೆಕ್ಕ ಇಲ್ಲದೋಟು ರುಂಡಗುಳ್ನ ಚೆಂಡಾಡಿದ ಶಿವಾಜಿ, ರಾಣಾ ಪ್ರತಾಪ, ಕೃಷ್ಣದೇವರಾಯ, ವೀರಮದಕರಿ ಅಂತಹ ಅರಸರು, ಚೆನ್ನಮ್ಮ, ಅಬ್ಬಕ್ಕ, ಝಾನ್ಸಿರಾಣಿ, ಬರೀ ಒನಕೇನಾಗೇ ಶತ್ರು ತಲೆಯೊಡೆದ ಓಬವ್ವನಂಥ ಹೆಣ್ಣಾಳು. ಇವರುಗೊಳ ಬ್ಲಡ್ಡೇ ನಮ್ಮ ಸರೀರದಾಗೂ ಹರೀತಾ ಅದೆ’ ಅಂತ ರಾಂಗ್ ಆದ.

‘ಆದ್ರೂ ಹಿಂದೂ ಹೆಣ್ಣುಮಕ್ಳ ಬಾಡಿ ಟಚ್ ಮಾಡಿದ್ರೆ ಕೈ ತೆಗೀರಿ ಅನ್ನೋದು ಸರಿಯೇ’- ಫ್ರೆಂಡ್ಸು ದಬಾಯಿಸಿದರು. ‘ಬಾಡಿ ಅಲ್ರೀ, ಹೆಂಡ್ರ ಸೆರಗು ಮುಟ್ಟಿದ್ಕೇ ಭೀಮ, ದುಶ್ಶಾಸನನ ಹೊಟ್ಟೆ ಬಗೆದ. ಹೆಂಡ್ರ ಕಿಡ್ನಾಪ್ ಮಾಡಿದ ರಾವಣನ ಹತ್ತು ತಲೆನಾಗೆ ಒಂದನ್ನೂ ಉಳಿಸಲಿಲ್ಲ ರಾಮ. ಪುರಾಣ ಓದ್ದೆ, ಇತಿಹಾಸ ತಿಳೀದೆ ಮಾತಾಡ್ಬೇಡ್ರಿ ಶಟಪ್‌’ ಅಂದ ಹನುಮಂತಿ.

ADVERTISEMENT

‘ನೋಡಯ್ಯ, ಗಾಂಧಿ ತಾತ ಸಿಂಗಲ್ ವೆಪನ್ನೂ ಹಿಡೀದೆ ಬ್ರಿಟೀಷರ್ನ ಓಡಿಸಲಿಲ್ವಾ?’ ಶಾಣ್ಯಾತನ ತೋರಿದರು ಫ್ರೆಂಡ್ಸು.

‘ನಮ್ಮ ಸಚಿವರು ಆವಾಗೇನಾರ ಇದ್ದಿದ್ರೆ ನಾಲಿಗೇನೇ ವೆಪನ್ ಮಾಡ್ಕಂಡು, ಇನ್ನೂರು ವರ್ಸ ಅವರನ್ನ ಇರಗೊಡದೆ ಇನ್ನೂರು ಮಿನಿಟ್ನಾಗೇ ಓಡ್ಸಿ ಫ್ರೀಡಂ ಕೊಡುಸ್ತಿದ್ರು ಗೊತ್ತಾ’– ರೇಗಿದ ಹನುಮಂತಿ, ಫ್ರೆಂಡ್ಸ್ ಬಾಯಿಗೆ ಪ್ಲಾಸ್ಟರ್ ಜಡಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.