ತೆಪರೇಸಿ ಹೊಸ ನ್ಯೂಸ್ ಚಾನೆಲ್ ಒಂದಕ್ಕೆ ರಾಜಕೀಯ ವರದಿಗಾರನಾಗಿ ಸೇರಲು ಸಂದರ್ಶನಕ್ಕೆ ಹೋಗಿದ್ದ. ಸಂಪಾದಕರು ಸಂದರ್ಶನ ಶುರು ಮಾಡಿದರು.
‘ನೀವು ರಾಜಕೀಯ ವರದಿಗಾರನಾಗಬೇಕೆಂದು ಏಕೆ ಇಷ್ಟಪಟ್ಟಿದ್ದೀರಿ?’
‘ಸದ್ಯ ಅದ್ರಲ್ಲಿ ಇರೋ ಮಜ ಬೇರೆ ಯಾವುದ್ರಲ್ಲಿ ಐತೆ ಸಾ... ಮನಸ್ಸು ಮಾಡಿದ್ರೆ ಒಂದು ಸರ್ಕಾರ ಉರುಳಿಸಬಹುದು. ನಿಮಗೆ ಆಗದೇ ಇರೋರ್ನ ಗುಡಿಸಿ ಗುಂಡಾಂತರ ಮಾಡಿಬಿಡಬಹುದು’.
‘ಪರವಾಗಿಲ್ಲ, ಟ್ರ್ಯಾಕ್ನಲ್ಲಿದ್ದೀರಿ. ‘ನಮ್ಮ ಸರ್ಕಾರ ಸುಭದ್ರವಾಗಿದೆ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ’ ಅಂದ್ರೆ ಏನರ್ಥ?’
‘ಸರ್ಕಾರ ಅಲುಗಾಡ್ತಾ ಐತೆ, ಭಿನ್ನಮತ ರಿಪೇರಿ ಮಾಡಾಕೆ ಟ್ರೈ ಮಾಡ್ತಾ ಅದಾರೆ ಅಂತ ಅರ್ಥ ಸಾ...’
‘ಗುಡ್, ರಾಜಕಾರಣಿಗಳು ಇದೇ ನನ್ನ ಕೊನೆಯ ಚುನಾವಣೆ ಅಂತಿರ್ತಾರಲ್ಲ, ಹಂಗಂದ್ರೆ ಏನು?’
‘ಈ ಸಲ ಗೆಲ್ಲಿಸಿಬಿಡಿ, ಐದು ವರ್ಷ ಆಗೋವರೆಗೆ ಮತ್ತೆ ಆ ಡೈಲಾಗ್ ಹೊಡೆಯಲ್ಲ ಅಂತ ಅರ್ಥ’.
‘ಕರೆಕ್ಟ್, ನನ್ನ ಮೇಲಿರೋ ಆಪಾದನೆ ಸಾಬೀತು ಮಾಡಿಬಿಟ್ರೆ ನಾನು ರಾಜಕೀಯದಿಂದಲೇ ನಿವೃತ್ತಿ ಆಗಿಬಿಡ್ತೀನಿ ಅಂತಿರ್ತಾರಲ್ಲ, ಹಂಗಂದ್ರೆ ಏನರ್ಥ?’
‘ತಪ್ಪು ಮಾಡಿರೋದು ನಿಜ. ಆದ್ರೆ ಸಾಬೀತು ಮಾಡೋಕೆ ಸಾಕ್ಷ್ಯಗಳಿಲ್ಲ ಅನ್ನೋ ಧೈರ್ಯ!’
‘ವೆರಿಗುಡ್, ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರಿ. ಕೊನೇ ಪ್ರಶ್ನೆ, ಮಂಡ್ಯ ರಾಜಕೀಯವನ್ನ ಒಂದೇ ಮಾತಿನಲ್ಲಿ ಹೇಳಿ ನೋಡೋಣ’.
‘ನನ್ನಂಥ ಕಚಡಾ ನನ್ಮಗ ಯಾರೂ ಇಲ್ಲ ಸಾ... ಈಗೇನು ಕೆಲ್ಸ ಕೊಡ್ತಿರೋ ಇಲ್ವೊ?’
ತೆಪರೇಸಿ ಮಾತು ಕೇಳಿ ಸಂಪಾದಕರು ಕೂತಲ್ಲೇ ಕಕ್ಕಾಬಿಕ್ಕಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.