ADVERTISEMENT

ಘರ್ ವಾಪ್ಸಿ ಮೇಳ

ರೇಣುಕಾ ನಿಡಗುಂದಿ
Published 22 ಜನವರಿ 2019, 19:58 IST
Last Updated 22 ಜನವರಿ 2019, 19:58 IST
   

‘ಹರ ಹರ ಗಂಗೆ!’ ಜೈಕಾರದ ದನಿ ಕೇಳಿ, ಗಂಗಾ ನದಿಯ ಉಳಿವಿಗಾಗಿ ನೂರ ಹನ್ನೊಂದ್ ದಿನಾ ಉಪವಾಸ ಮಾಡಿ ಜೀಂವಾ ಕಳಕೊಂಡ ಸಾನಂದ ಸ್ವಾಮೀಜಿಯೋರ್ ಆತ್ಮ ತ್ರಿವೇಣಿ ಸಂಗಮದ ದಿವ್ಯ ವೈಭವ ಕಂಡು ಒದ್ದಾಡ
ಲಿಕ್ಕತ್ತಿತ್ತು.

ಜನ ಮಳ್ಳೋ ಜಾತ್ರಿ ಮಳ್ಳೋ ಅಂತ ಹಿರ‍್ಯಾರು ಅಂದಿದ್ದು ಖರೇ! ಎಷ್ಟೊಂದ್ ಹಳ್ಳಿಯಾಗ್ ಲೈಟಿಲ್ಲ, ಸಂಡಾಸ್ ಇಲ್ಲ, ಒಳಚರಂಡಿ ಇಲ್ಲ. ಇಲ್ಲಿ ಲಕ್ಷಗಟ್ಟಲೆ ಸಂಡಾಸ್ ಕಟ್ಟೂ ಬದಲ, ನೂರ ಹಳ್ಯಾಗ ಸಂಡಾಸ್ ಕಟ್ಟಿದ್ರೂ ಪುಣ್ಯ ಬರ್ತಿತ್ತು. ಕೋಟಿಗಟ್ಟಲೆ ರೊಕ್ಕಾ ಸುರ್ದು ಉತ್ಪಾದಿಸಿದ ಸಾವಿರಾರು ಟನ್ನುಗಟ್ಟಲೆ ಗಲೀಜನ್ನು ಎಲ್ಲಿ ಒಗೀತಾರೆ! ಸ್ವಾಮೀಜಿ ಮೈ ಉರಿಯಾಕತ್ತಿತ್ತು!

ಜೂನಾ ಅಖಾಡಾದ ಮುಂದ ಭಾಳ ಮಂದಿ ಲೈನ್ ಹಚ್ಚಿ ನಿಂತಿದ್ರು. ಇವ್ರೆಲ್ಲಾ ಗಂಗಮ್ಮನ ಉಳಿವಿಗಾಗಿ ಹೋರಾಡುವವರೋ ಏನೋ, ಇಲ್ಯಾಕ ನಿಂತಾರಂತ ಕುತೂಹಲ ಆಗಿ ಸ್ವಾಮೀಜಿ ಮುಂದ ಹೋಗಿ ಒಬ್ಬಾಂವನ್ನ ಕೇಳಿದ್ರು.

ADVERTISEMENT

‘ಇಲ್ಲ್ಯಾಕ ನಿಂತೀರಿ ನೀವೆಲ್ಲ! ಸ್ವಾಮೀಜಿ ಏನ್‌, ಸರಾ– ಬಳಿ– ಉಂಗರಾ ಕೊಡತಾರೇನಪಾ?’ ಒಬ್ಬಾಂವ ಸಾನಂದ ಸ್ವಾಮೀಜೀನ್ನ ಯಾವೂರಂವ ಇಂವಾ ಅನ್ನೂಹಂಗ ಕೆಕ್ಕರಿಸ್ಕೊಂಡ್‌ ನೋಡಿ, ‘ಯಾಕ ಮುತ್ಯಾ ನಿಂಗೇನು ಗೊತ್ತಿಲ್ಲೇನು? ಮಳ್ಳನಂಗ ಕೇಳತೀಯಲ್ಲ. ಈ ಸ್ವಾಮೀಜಿ ನಮಗೆಲ್ಲಾರಗೂ ‘ಘರ್ ವಾಪ್ಸಿ’ ಮನೀಗೆ ವಾಪಸ್ ಕಳಿಸ್ತಾರಂತ’ ಅಂದ.

‘ಗದಗದಿಸೋ ಥಂಡ್ಯಾಗ ತಿಂಗಳೊಪ್ಪತ್ತಿಂದ ಮನೀ ಮಠಾ ಬಿಟ್ಟು ಇಲ್ಲಿ ತಾಡಪತ್ರಿ ತಂಬೂದಾಗ ಅದೇವ್ರಿ. ಒಂದ ಕಂಬಳಿ ಕೊಟ್ಟಿಲ್ಲಾ, ಬೆಚ್ಚಗ್ ಹಾಸಿಗಿಲ್ಲ. ಥಂಡಿ ತಡಿಲಾರ್ದ ಒಬ್ಬಾಂವ ಸತ್ತ ಹ್ವಾದನರಿ. ಗುತ್ತಿಗಿದಾರ್‍ರು ಎಳಕೊಂಡ ಬಂದಾ‌ರ‍್ರಿ ನಮಗ. ಸಂಡಾಸಾ ತೊಳಿಯಾಕ ನೀರ ಹೊತ್ತ ಹೊತ್ತ ಹೆಣಾ ಬಿದ್ದೋಗೇತ್ರಿ, ರಾಶಿ ರಾಶಿ ಗಲೀಜು, ಹೊಲಸು ಬಳ್ದು ಬಳ್ದು ವಾಕರಿಕೆ ಬಂದೋಗೇತ್ರಿ’.

‘ನಿಮ್ಮ ಕರ್ಮ! ಏನ್‌ ಕುಂಭಮೇಳವೋ ಏನ್‌ ಪುಣ್ಯಸ್ನಾನವೋ’ ಅನಕೊಂಡು ಸ್ವಾಮೀಜಿ ಆತ್ಮ ಮಾಯವಾತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.