ತಿಂಗಳೇಶನದು ಒಂದು ವಾಕಿಂಗ್ ಗ್ಯಾಂಗ್ ಇದೆ. ಅದು ಕರ್ನಾಟಕದಲ್ಲಿ ಕಮಲ ಸರ್ಕಾರ ಅರಳಲು ಅರ್ಥಾತ್ ತೆನೆಹೊತ್ತ ರೈತಮಹಿಳೆ ಗಳಗಳ ಅಳಲು ಕಾರಣವಾದ ಕ್ಷಿಪ್ರಕ್ರಾಂತಿ ತಂಡದಷ್ಟೇ ಸಮರ್ಥ. ಒಗ್ಗಟ್ಟು, ಒಳಹೊಡೆತ, ಸಮಯಸಾಧನೆ… ಎಲ್ಲದರಲ್ಲೂ ಸರಿಸಮಾನ.
ತಂಡದ ಸದಸ್ಯರೆಲ್ಲಾ ನಿವೃತ್ತರು (ಅತೃಪ್ತರು ಎಂದು ತಪ್ಪಾಗಿ ಓದಿಕೊಳ್ಳಬೇಡಿ!). ಜೀವನೋತ್ಸಾಹಕ್ಕೆ (ಅಧಿಕಾರದಾಹ ಅಲ್ಲ!) ಮಿತಿಯಿಲ್ಲ. ಪಾರ್ಟಿಗೀರ್ಟಿ ಅಂತ ಹಂಬಲಿಸಲಾರರು. ಯಾರಾದರೂ ರಾತ್ರಿಯ ಪಾರ್ಟಿಗೆ ಕರೆದರೆ ಬೆಳಗಿನ ಜಾವದವರೆಗೆ ನಿಭಾಯಿಸುವ ಶಕ್ತಿಯುಳ್ಳವರು! ಅವರ ಸಂತಸಕ್ಕೆ ಇವರು ದುಃಖ, ಇವರ ದುಃಖಕ್ಕೆ ಅವರು ಸಂತಸ ಪಡುವ ಧಾರಾಳ ಗುಣಕ್ಕೆ ಕೊರತೆಯಿಲ್ಲ. ಷೇರು ಮಾರುಕಟ್ಟೆ, ಅಮೆರಿಕ ಅಧ್ಯಕ್ಷರ ಚುನಾವಣೆ, ಸಕ್ಕರೆ ಕಾಯಿಲೆಯ ಚಿಕಿತ್ಸೆ ಎಂದೆಲ್ಲ ನಡೆಯುವ ಚರ್ಚೆಯಲ್ಲಿ ಗೆಳೆಯರ ನಡುವೆ ಹೊಸದೊಂದು ವಿಷಯ ಪ್ರಸ್ತಾಪವಾಯಿತು.
‘ಬೆಳಿಗ್ಗೆ ನನ್ನ ಕಿರಿಯ ಮೊಮ್ಮಗ ದೋಸೆ ಮಾಡಿಲ್ಲವೆಂದು ಅವರಮ್ಮನ ಮೇಲೆ ಮುನಿಸಿಕೊಂಡ’.
‘ಅರೆ… ಹಾಗೇಕೆ ಮಾಡಿದ? ಅವರಮ್ಮ ಅವನಿಗೆ ಏನು ಬೇಕೋ ಅದನ್ನೇ ಮಾಡಿ
ಕೊಡಬಾರದಿತ್ತೇ…?’
‘ದೊಡ್ಡ ಮಗನಿಗೆ ಇಡ್ಲಿ ಇಷ್ಟ, ಚಿಕ್ಕವನಿಗೆ ದೋಸೆ. ಪಾಪ, ಅವರಮ್ಮ ಏನು ಮಾಡಿಯಾಳು? ನಾನು ಇಬ್ಬರನ್ನೂ ಕರೆದು, ‘ತಿಂಡಿಯ ಆಯ್ಕೆ ನಿಮಗಿಲ್ಲ, ಅದು ನಿಮ್ಮಮ್ಮನ ಪರಮಾಧಿಕಾರ’ ಎಂದು ಸ್ಪಷ್ಟವಾಗಿ ಹೇಳಿದ್ದೇನೆ’.
‘ಮತ್ತೇಕೆ ಮೊಮ್ಮಕ್ಕಳಲ್ಲಿ ಅಸಮಾಧಾನ?’
‘ಅವನಮ್ಮನೇ ‘ಅದು ನನ್ನ ಪರಮಾಧಿಕಾರ’ ಎಂದಿದ್ದರೆ ಮುಗಿದಿರೋದು. ಆದರೆ ಆಕೆ, ‘ನಿಮ್ಮಪ್ಪನ್ನ ಕೇಳು’ ಎಂದು ಜಾರಿಕೊಳ್ಳಲು ನೋಡಿದ್ದಾಳೆ. ಅವರಪ್ಪ ಹೆಂಡತಿ ಮೇಲಿನ ಬೇರಾವುದೋ ಸಿಟ್ಟು ತೀರಿಸಿಕೊಳ್ಳಲು, ‘ನಿನಗೆ ಪರಮಾಧಿಕಾರ ಕೊಟ್ಟಿದ್ಯಾರು’ ಎಂದಿದ್ದಾನೆ!’
‘ಹಾಗಾದರೆ ಸೊಸೆಗೆ ಪರಮಾಧಿಕಾರ ಕೊಡುವ ಸರ್ವಾಧಿಕಾರ ಮಾವನಿಗೆ ಇದೆಯೋ ಇಲ್ಲವೋ ಎಂಬುದು ಮೊದಲು
ತೀರ್ಮಾನವಾಗಬೇಕು!’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.