ADVERTISEMENT

ಬೇತಾಳ ಷಡ್ಯಂತ್ರ

ಲಿಂಗರಾಜು ಡಿ.ಎಸ್
Published 8 ಮಾರ್ಚ್ 2021, 19:30 IST
Last Updated 8 ಮಾರ್ಚ್ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು ರೋಡುಗಳ ರಿಪೇರಿ ಕಾಮಗಾರಿ ಬೇಗ ಮುಗೀತದಾ ಇಲ್ಲಾ ಈ ಶನ್ಯೇಸಿ ನನ ಆಟುಗಳ್ಳ ಬೇತಾಳನ್ನ ಹೊತ್ತುಕೋಗೂ ಕೆಲಸ ಮೊದಲು ಮುಗೀತದಾ ಗೊತಾಗ್ನಿಲ್ಲ. ಆದರೂ ನಾನಾ ಪಾದಯಾತ್ರೆಗಳ ನಡಂತರದಗೆ ಜಾಗ ಮಾಡಿಕ್ಯಂಡು ಈ ಶನಿಗೇಡಿ ನನ ಮಗಂದು ಎಲ್ಲ್ಯದೆ ಅಂತ ಹುಡುಕಿದ್ರೆ, ಹೋಗಿ ಬೆಳಗಾವಿ ಸುವರ್ಣಸೌಧುಕ್ಕೆ ತಲೆಕೆಳಮಕನಾಗಿ ನ್ಯಾತಾಕ್ಕಂಡು ‘ನಾನು ಬಂದೆ, ನಾನು ನೋಡಿದೆ, ನಾನು ಗೆದ್ದೆ’ ಅಂತ ಗಂಟಲು ಹರಕತಿತ್ತು. ಯಾರು ಬಂದ್ರು, ಗೆದ್ರು ತಿಳಕಳನ ಅಂದ್ರೆ ಮಾತಾಡಂಗಿಲ್ಲ!

‘ಬಾ ಬೊಡ್ಡಿಹೈದ್ನೆ, ವ್ಯಾಕ್ಸೀನ್ ತಗಂಡುದಯಾ ಇಲ್ಲವಾ?’ ನನ್ನ ಕಂಡೇಟಿಗೆ ವಿಚಾರಿಸಿಗ್ಯತ್ತು. ಸಿಕ್ಕು ಬಿಡಿಸಿ ಕೆಳಕ್ಕಿಳಿಸಿ ಹೆಗಲಿಗಾಕ್ಕ್ಯಂದು ಅಲ್ಲಿಂದ ಕಡದೆ.

‘ಲೋ, ಕೋವಿಡ್ ಟೈಮಲ್ಲೇ ಮಹಿಳೆಯರ ಮೇಲಿನ ದೌರ್ಜನ್ಯ ಜಾಸ್ತಿಯಾಗ್ಯದೆ ಅಂದದಲ್ಲೋ ಆಯೋಗ?’ ಕಂಡೋರ ಸಮಾಚಾರ ನಮಗ್ಯಾಕೆ ಅಂತ ಸುಮ್ಮನಿದ್ದೆ.

ADVERTISEMENT

‘ಜೀವನ ನಿರ್ವಹಣೆಗೆ ದೇಶದಲ್ಲೇ ಬೆಂಗ ಳೂರು ಉತ್ತಮವಂತೆ ಕಲಾ, ಹೌದೇನೋ?’ ಬೆಂಗಳೂರಾದ ಬೆಂಗಳೂರು ರೋಡೆಲ್ಲಾ ಅಗೆದು ಅದ್ವಾನೆಬ್ಬಿಸವ್ರೆ, ಅದೇನು ಉತ್ತಮವಾಗ್ಯದೋ ತಿಳೀದೆ ಸಿಟ್ಟು ಬಂದು ಕತ್ತಿ ತುದೀಲಿ ತಿವಿದೆ. ವಯಕ್ ಅಂದು ಸುಮ್ಮಗಾಗಿ ಎರಡು ಸೆಕೆಂಡಿಗೇ ಮತ್ತೆ ಸಾರಣೆ ಶುರುವಚ್ಚಿಗ್ಯತು.

‘ಅದೇನ್ಲಾ, ಒನ್ ನೇಶನ್ ಒನ್ ಕಲೆಕ್ಷನ್ ಅಂದ್ರೆ?’ ಅದರ ಪ್ರಶ್ನೆ ಕೇಳಿ ನನಗೆ ಬಲು ನಗ ಬಂದ್ರೂ ತಡಕ ಸುಮ್ಮನಾದೆ.

‘ರಾಜಾವುಲಿ ಬಜೆಟ್ ಸಮಾಚಾರ ಏನಪ್ಪಾ? ತಿರಗಾ ನಿನ್ನ ಬುಡಕೆ ಬಿಸಿನೀರು ತಂದವ್ರಾ? ಬಳೀಲಿಲ್ಲ-ಬಾಚಲಿಲ್ಲ ಎಲ್ಲಾ ಬಂದು ತಲೆಗೇ ಹೊಡಿತವಲ್ಲೋ! ನಾವೂ ಬೇತಾಳಗಳಿಗೆ ಅಸೆಂಬ್ಲೀಲಿ ಮೀಸಲಾತಿ ಕೊಡಿ ಅಂತ ರ‍್ಯಾಲಿ ಮಾಡಬಕು ಅಂತಿದೀವಿ ಕನೋ’ ಅಂತು. ‘ಬಡ್ಡೆತ್ತುದೇ, ಬೊಂಬೂಸವಾರಿಯಾದ ಮ್ಯಾಲೆ ನಿನಗೆ ಸಿದ್ದಣ್ಣನ ಅಕ್ಕೀನೂ ಸಿಕ್ಕಕುಲ್ಲ’ ಅಂದು ಕುಂಡಿಮ್ಯಾಲೆ ನಾಲ್ಕು ಬಾರಿಸಿದೆ. ‘ನೀನು ಮಾತಾಡಿಬುಟ್ಟೆ’ ಅಂತ ಬಾಲವ ಸುತ್ತಿಗ್ಯಂಡು ಕುಣೀತಾ ಸೀಡಿ ಥರಾ ಪಣ್ಣನೆ ನೆಗೆದು ಹೊಂಟೋಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.