ADVERTISEMENT

ಚುರುಮುರಿ: ಇಂದಿರಾ ನಗರದ ಗೂಂಡ

ಮಣ್ಣೆ ರಾಜು
Published 14 ಏಪ್ರಿಲ್ 2021, 19:30 IST
Last Updated 14 ಏಪ್ರಿಲ್ 2021, 19:30 IST
Churumuri-15-04-2021
Churumuri-15-04-2021   

ಶಂಕ್ರಿ ಟಿ.ವಿಯಲ್ಲಿ ಐಪಿಎಲ್ ಕ್ರಿಕೆಟ್ ನೋಡುತ್ತಿದ್ದ. ಹೊರಗೆ ‘ಫಳಾರ್...’ ಎಂಬ ಶಬ್ದ ಕೇಳಿಸಿತು.

‘ರೀ, ಬಾಲ್ ಕಿಟಕಿ ಗಾಜು ಒಡೆಯಿತು’ ಎಂದು ಸುಮಿ ಗಾಬರಿಯಾದಳು.

‘ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್ ನಮ್ಮ ಮನೆ ಕಿಟಕಿ ಗಾಜು ಒಡೆಯಿತೆಂದರೆ ಅದು ಗ್ರೇಟ್ ಸಿಕ್ಸ್!’ ಶಂಕ್ರಿ ಚಪ್ಪಾಳೆ ತಟ್ಟಿದ.

ADVERTISEMENT

‘ಅದು ರೋಹಿತ್ ಶರ್ಮಾನ ಹೊಡೆತ ಅಲ್ಲ...’ ಎಂದು ಆಚೆ ಹೋಗಿ ಬಾಲ್ ತಂದಳು.

‘ಆಂಟಿ ಬಾಲ್ ಕೊಡಿ ಪ್ಲೀಸ್...’ ಅಂತ ಹುಡುಗರು ಬಂದು ಗೋಗರೆದರು.

‘ಕಿಟಕಿ ರಿಪೇರಿ ಮಾಡಿಸೋವರೆಗೂ ಬಾಲ್ ಕೊಡಲ್ಲ’ ಅಂದಳು.

‘ಇದುವರೆಗೂ ಇವನು ಎಷ್ಟು ಕಿಟಕಿ ಗಾಜು ಒಡೆದಿದ್ದಾನೆ?’ ಶಂಕ್ರಿ ಕೇಳಿದ.

‘ಹನ್ನೊಂದು ಹೊಡೆದಿದ್ದಾನೆ, ಇನ್ನೊಂದು ಹೊಡೆದರೆ ಡಜನ್ ಆಗುತ್ತೆ ಅಂಕಲ್. ಜೊತೆಗೆ, ಹದಿನಾರು ಕಾರುಗಳ ಗಾಜು ಒಡೆದಿದ್ದಾನೆ. ಕೊರೊನಾ ರಜೆ ಕಂಟಿನ್ಯೂ ಆದರೆ ಗ್ಲಾಸ್ ಒಡೆತದಲ್ಲಿ ಸೆಂಚುರಿ ಬಾರಿಸಿಬಿಡ್ತಾನೆ...’

‘ಹೌದೇ? ವೆರಿಗುಡ್! ಇಷ್ಟೊಂದು ಗಾಜು ಒಡೆದ ದಾಖಲೆಯನ್ನು ಕ್ರಿಸ್ ಗೇಲೂ ಮುರಿಯಲಾಗಿಲ್ಲ... ಎದುರು ಮನೆಯವನ ಸೊಂಟ ಮುರಿದಿದ್ದು ನೀನೇ ಅಲ್ವಾ?’ ಶಂಕ್ರಿ ಕೇಳಿದ.

‘ಹೌದು ಅಂಕಲ್, ಸಾರಿ...’ ಅಂದ.

‘ಭಾಳಾ ಮೆರೆಯುತ್ತಿದ್ದ, ನನಗಂತೂ ಮುರಿಯಲು ಆಗಲಿಲ್ಲ, ನೀನಾದ್ರೂ ಮುರಿದೆಯಲ್ಲ’.

‘ಮೊನ್ನೆ ಇವನು ರಂಗಜ್ಜಿಯ ಹಲ್ಲು ಮುರಿದ ಅಂಕಲ್...’

‘ಅಜ್ಜಿ ಮನೆಯವರು ಬಂದು ಇವನ ಕಾಲು ಮುರಿಯಬೇಕಾಗಿತ್ತು’ ಸುಮಿಗೆ ಸಿಟ್ಟು.

‘ಇಲ್ಲಾ ಆಂಟಿ, ಹಲ್ಲು ಮುರಿದಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ರು. ಅಜ್ಜಿಗೆ ಹಲ್ಲು ಬಾಧೆಯಾಗುತ್ತಿತ್ತಂತೆ, ಈಗ ನೋವು ನಿವಾರಣೆ ಆಗಿದೆಯಂತೆ’.

‘ಓಹೋ!...ಇಷ್ಟೆಲ್ಲಾ ಮುರಿದಿರುವ ನೀನು ಈ ಇಂದಿರಾ ನಗರದ ಗೂಂಡ...’ ಎಂದು ಸುಮಿ ಕೊಂಡಾಡಿ, ಹುಡುಗರಿಗೆ ಬಾಲೂ ಕೊಟ್ಟು, ತಿಂಡಿಯನ್ನೂ ಕೊಟ್ಟು ಕಳಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.