‘ಲೇ ತೆಪರ, ಈ ರಾಜಕೀಯದಲ್ಲಿ ನವರಂಗಿ ನಾಟಕ ಅಂದ್ರೆ ಏನ್ಲೆ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ಅದಾ... ಮಾತಲ್ಲಿ ಕಲ್ ಕಲರ್ ಕಾಗೆ ಹಾರಿಸೋದು, ಈಗಿನ್ನೂ ಹೇಳಿದ್ದನ್ನ ಹೇಳೇ ಇಲ್ಲ ಅನ್ನೋದು, ಗೋಸುಂಬೆ ತರ ಬಣ್ಣ ಬದಲಾಯ್ಸೋದು, ಹೊತ್ ಬಂದಂಗೆ ಕೊಡೆ ಹಿಡಿಯೋದು... ಸಾಕಾ ಬೇಕಾ?’ ತೆಪರೇಸಿ ನಕ್ಕ.
‘ಅಲ್ಲ, ಬಣ್ಣ ಇರೋದೇ ಏಳಲ್ವಾ? ನವರಂಗಿ ಹೆಂಗೆ?’
‘ರಾಜಕಾರಣಿಗಳಿಗೆ ಎರಡು ಜಾಸ್ತಿ ಇರ್ತಾವೆ ಕಣಲೆ, ನೀನೊಬ್ಬ...’
‘ಈಗ ರಾಜಕೀಯ ಅನ್ನೋ ಪದಕ್ಕೆ ಅರ್ಥಾನೇ ಬದಲಾಗೇತಪ, ರಾಜಕೀಯ ಮಾಡ್ತಾನೆ ಅಂದ್ರೆ ಏನೋ ಕೆಟ್ಟದ್ದು ಮಾಡ್ತಾನೆ, ಟೋಪಿ ಹಾಕ್ತಾನೆ ಅಂತ ಆಗೋಗಿದೆ...’ ಗುಡ್ಡೆ ನಕ್ಕ.
‘ಕರೆಕ್ಟ್, ಈ ರಾಜಕೀಯದಾಗೂ ನಮು ನಮೂನಿ ಅದಾವೆ ಕಣಲೆ. ಬಣ ರಾಜಕೀಯ ಆತು, ಈಗ ಹೆಣ ರಾಜಕೀಯ ನಡೀತಾ ಐತಿ. ಟಿ.ವಿ ತುಂಬಾ ಬರೀ ಬುರುಡೆಗಳದ್ದೇ ಸುದ್ದಿ. ರಾತ್ರಿ ಕನಸಿನಾಗೆಲ್ಲ ಬರ್ತಾವಪ...’ ದುಬ್ಬೀರ ತೆಲಿ ಕೊಡವಿದ.
‘ಅಲ್ಲ, ಈ ರಾಜಕಾರಣಿಗಳು ಅಧಿಕಾರದಲ್ಲಿದ್ದಾಗ ಒಂದು, ಇಲ್ಲದಾಗ ಇನ್ನೊಂದು... ಅವರ ಮಾತು ಕೇಳ್ತಿದ್ರೆ ತೆಲಿ ಕೆಟ್ ಗೊಬ್ರ ಆಗ್ತತಿ. ರಾಜಕಾರಣ ಅನ್ನೋದು ಸುಳ್ಳಿನ ಸಂತಿ ಆಗೇತಿ ನೋಡ್ರಪ...’ ಮಂಜಮ್ಮಗೆ ಸಿಟ್ಟು ಬಂತು.
‘ಅದಿರ್ಲಿ, ಈಗ ಅದೇನೋ ನವೆಂಬರ್ ಕ್ರಾಂತಿಯಂತೆ? ಮೂವರು ಡಿಸಿಎಂ ಆಗ್ತಾರಂತೆ? ಸಂಪುಟಕ್ಕೆ ಸರ್ಜರಿ ಅಂತೆ?’ ಕೊಟ್ರೇಶಿ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿದ.
‘ಅದು ‘ಸು ಅಂಡ್ ಸೋ’ಗೆ ಬಿಟ್ಟದ್ದು’ ಎಂದ ಗುಡ್ಡೆ.
‘ಸು ಅಂಡ್ ಸೋ ನಾ? ಅಂದ್ರೆ?’
‘ಸುರ್ಜೆವಾಲಾ ಅಂಡ್ ಸೋನಿಯಾ ಸನ್ಗೆ ಬಿಟ್ಟದ್ದು ಅಂದೆ. ಅರ್ಥ ಆಗ್ಲಿಲ್ವಾ? ರಾಹುಲ್ ಗಾಂಧಿಗೆ, ಹೈಕಮಾಂಡ್ಗೆ ಬಿಟ್ಟದ್ದು ಕಣಲೆ...’
‘ಓ ಹಂಗಾ... ನಾನೆಲ್ಲೋ ಈ ‘ಸು ಫ್ರಮ್ ಸೋ’ ಸಿನಿಮಾದ ತರ ಇದೂ ಬೇರೇನೋ ಇರ್ಬೇಕು ಅನ್ಕಂಡಿದ್ದೆ’ ಎಂದ ಕೊಟ್ರ.
ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.