
‘ಏನ್ರಪ್ಪಾ, ನಮ್ ಕೆಲವ್ರು ಶಾಸಕ್ರು ಈ ಕುರಿ, ಎಮ್ಮೆ, ನಾಯಿ ಬಗ್ಗೆ ಅಧ್ಯಯನ ಮಾಡಕ್ಕೆ ಫಾರಿನ್ಗೆ ಒಂಟವ್ರಲ್ಲ’ ಎಂದ ಗುದ್ಲಿಂಗ.
‘ಅಧ್ಯಯನ ಅಲ್ಲ, ಪರಿಸ್ಥಿತಿ ಇನ್ನೂ ಅಧ್ವಾನ ಆದಾತು ಅಂತ ಓಯ್ತಾವ್ರೆ. ಮ್ಯಾಕೆ, ಎಮ್ಮೆ ಬಗ್ಗೆ ಅಲ್ ಓಗ್ ಏನ್ಲಾ ತಿಳ್ಕಳದೈತೆ? ಕುದ್ರೆ ಬಗ್ಗೆ ತಿಳ್ಕಳಕ್ಕೆ ಓಯ್ತಾವ್ರೆ’ ಎಂದ ಮಾಲಿಂಗ.
‘ಕುದ್ರೆ ಬಗ್ಗೇನಾ? ಅಂಗಂದ್ರೆ ಏನ್ಲಾ?’
‘ಲೇಯ್, ಈ ದೇಶೀ ಕುದ್ರೆಗಳು ಅವಾಗವಾಗ ಲಾಯ, ಲಾಯಲ್ಟಿ ಎಲ್ಡೂ ಬದ್ಲಾಯಿಸ್ತಾ ಇರ್ತವೆ. ಅದಕ್ಕೆ ಅವನ್ನ ವಿದೇಶೀ ಲಾಯಕ್ಕೆ ಕಳಿಸ್ತಾವ್ರೆ’.
‘ಅಲ್ಲ, ಇಲ್ಲೇ ನಮ್ಮಲ್ಲೇ ಬೇಕಾದಷ್ಟು ರಾಯಲ್ ಲಾಯಗಳು ಇದ್ವಲ್ಲಪ್ಪ! ಅವನ್ನೆಲ್ಲಾ ಅಲ್ಲೇ ತಾನೇ ಕಟ್ತಾ ಇದ್ದದ್ದು?’
‘ಬಂಡೆ ಕುದ್ರೆ ವ್ಯವಹಾರದಲ್ಲಿ ಸ್ಪೆಷಲಿಸ್ಟು! ಗುಜರಾತು, ಹೈದ್ರಾಬಾದಲ್ಲೆಲ್ಲಾ ಲಾಯ ಮಾಡಿ ಅನುಭವ ಐತೆ. ಅದ್ಕೇ ರಿಸ್ಕ್ ತಗಳಾದು ಬ್ಯಾಡ ಅಂತ ಫಾರಿನ್ಗೆ ಕಳಿಸ್ತಾವ್ರೆ. ಅಲ್ ಓಗಿ ಕುದ್ರೆ ಕಣ್ ಕಟ್ಟಿ ಹೈಕಮಾಂಡ್ ಟ್ರಾಕಲ್ಲಿ ಓಡ್ಸಾದು ಎಂಗೆ, ಫಾರಿನ್ನಲ್ಲಿ ಕುದ್ರೆ ಯಾಪಾರ ಎಂಗ್ ಮಾಡ್ತಾರೆ ಅಂತೆಲ್ಲಾ ತಿಳ್ಕಂಡು ಬತ್ತಾರೆ’.
‘ಮತ್ತೆ ದೇಶೀ ಹಿಂಡಿ ಬದ್ಲು ಫಾರಿನ್ ಹುಂಡಿ ಒಡೀಬೇಕು ಅನ್ನು! ಸ್ವಂತ ದುಡ್ಡಲ್ಲಿ ಓಯ್ತಾವ್ರಂತೆ, ಓಗ್ಲಿ ಬುಡು’ ಎಂದು ಹೇಳಿದ ಗುದ್ಲಿಂಗ.
‘ಸುಮ್ಕಿರ್ಲಾ, ಅನುದಾನ ಇಲ್ದೆ ಚುನಾವಣೆಗೆ ಹಾಕಿದ್ ಬಂಡವಾಳನೇ ವಾಪಸ್ ಬಂದಿಲ್ಲ ಅಂತ ಬಡ್ಕತಾವ್ರೆ, ಅಂತಾದ್ರಲ್ಲಿ ಸ್ವಾಮಿಕಾರ್ಯಕ್ಕೆ ಸ್ವಂತ ದುಡ್ಡು ಯಾಕ್ ಬಿಚ್ಚಾರು?’
‘ಅದೂ ದಿಟನೇಯ. ಆದ್ರೆ, ಫಾರಿನ್ಗೆ ಹೋಗಾದು ಸದ್ಯಕ್ಕಿಲ್ಲ ಅಂತವ್ರೆ. ಟೂರ್ ಫ್ರಮ್ ಮಾಡ್ತಾರೋ ಏನೋ... ಅದಿರ್ಲಿ, ನಮ್ಮ ಕಮಲ ಪಾಳೆಯ ಕುದ್ರೆ ಯಾಪಾರಕ್ಕೆ ಇಳ್ಯಲ್ವಂತಾ?’
‘ಅಯ್ಯೋ, ಅವರ ಲಾಯಾನೇ ನೆಟ್ಟಗಿಲ್ಲ, ಕಾಲಿ ಟ್ರಂಕ್ ಹಿಡ್ಕಂಡು, ಹಳೇ ಪಾತ್ರೆ ಹಳೇ ಕಬ್ಬಣ, ಹಳೇಪೇಪರ್ ಕಣೋ ಹೋಯಿ ಅಂತ ಭಜನೆ ಮಾಡ್ತಾವ್ರೆ’ ಅಂದ ಪರ್ಮೇಶಿ.
ಎಲ್ಲಾ ಗೊಳ್ಳನೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.